ನಗರಸಭೆ ಅಧ್ಯಕ್ಷರ ಗದ್ದುಗೆ ಗುದ್ದಾಟಕ್ಕೆ ಬದಲಾದ ಕುರ್ಚಿ
1 min readಚಿಕ್ಕಮಗಳೂರು: ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ರಾಜೀನಾಮೆ ನೀಡದೆ ಸತಾಯಿಸುತ್ತಿರುವ ಹಿನ್ನಲೆ ನಗರಸಭೆ ಬಿಜೆಪಿ ಸದಸ್ಯರು ನಗರಸಭೆ ಅಧ್ಯಕ್ಷರ ಕುರ್ಚಿ ಬದಲಾಯಿಸಿ ಅಧ್ಯಕ್ಷರ ವಿರುದ್ಧ ವಿಭಿನ್ನವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ರಾಜೀನಾಮೆ ಪ್ರಹಸನ ತಾರಕಕ್ಕೇರಿದ್ದು, ನಗರಸಭೆ ಬಿಜೆಪಿ ಸದಸ್ಯರು ನಗರಸಭೆ ಅಧ್ಯಕ್ಷರ ಕುಷನ್ ಚೇರ್ ತೆಗೆದು, ಪ್ಲಾಸ್ಟಿಕ್ ಚೇರ್ ಇಟ್ಟು , ಅಂದು ಅಧ್ಯಕ್ಷರ ಕುರ್ಚಿ ಹೀಗಿತ್ತು. ಸದಸ್ಯರ ವಿಶ್ವಾಸ ಕಳೆದುಕೊಂಡ ಅವರ ಕುರ್ಚಿ ಹೀಗಾಗಿದೆ ಎಂದು ನಗರಸಭೆ ಬಿಜೆಪಿ ಸದಸ್ಯರು ಅಧ್ಯಕ್ಷರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನರಸಭೆಯಲ್ಲಿ ಗದ್ದುಗೆಗಾಗಿ ಗುದ್ದಾಟ ಮುಂದುವರೆದಿದೆ. ಬಿಜೆಪಿ ಪಕ್ಷದ ಆಂತರಿಕ ಒಪ್ಪಂದದಂತೆ ಮೊದಲ ಅವಧಿಗೆ ನಗರಸಭೆ ಅಧ್ಯಕ್ಷರನ್ನಾಗಿ ವರಸಿದ್ಧಿ ವೇಣುಗೋಪಾಲ್ ಅವರನ್ನು ಆಯ್ಕೆ ಮಾಡಲಾಗಿತ್ತು. ಅವರ ಅವಧಿ ಮುಗಿದ ಹಿನ್ನಲೆಯಲ್ಲಿ ಇತ್ತೀಚೆಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ರಾಜಿನಾಮೆ ಪತ್ರ ಸಲ್ಲಿಸಿದರು. ಕೆಲವು ದಿನಗಳ ಬೆಳವಣಿಗೆ ನಂತರ ರಾಜೀನಾಮೆಯನ್ನು ಹಿಂಪಡೆದುಕೊಂಡಿದ್ದರು.
ಪಕ್ಷದ ಮುಖಂಡರ ಒತ್ತಾಯ ಮತ್ತು ನಗರಸಭೆ ಬಿಜೆಪಿ ಸದಸ್ಯರ ಆಗ್ರಹಕ್ಕೆ ಮಣಿದ ವರಸಿದ್ದಿ ವೇಣುಗೋಪಾಲ್ ಮತ್ತೆ 2ನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಾಲುಸಾಲು ರಜೆಗಳು ಬಂದ ಹಿನ್ನೆಲೆಯಲ್ಲಿ ಮತ್ತೆ ರಾಜೀನಾಮೆಯನ್ನು ಹಿಂಪಡೆದು ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿದ್ದರು. ಇತ್ತ ನಗರದಲ್ಲಿ ನಗರಸಭೆ ಅಧ್ಯಕ್ಷರು ನಾಪತ್ತೆ ವಿಷಯ ಹರಿದಾಡುತ್ತಿದ್ದಂತೆ ವಾಟ್ಸಪ್ ಮೂಲಕ ನಾಪತ್ತೆ ಸುದ್ದಿ ಸತ್ಯಕ್ಕೆ ದೂರವಾಗಿದೆ. ಕುಟುಂಬದೊಂದಿಗೆ ಪ್ರವಾಸಕ್ಕೆತೆರಳಿದ್ದು, ನಗರಕ್ಕೆ ಹಿಂದಿರುಗಿದ ನಂತರ ಮಾಹಿತಿ ತಿಳಿಸುವುದಾಗಿ ಬರೆದುಕೊಂಡಿದ್ದರು.
ನಗರಸಭೆಗೆ ಬಂದರೆ ಕಚೇರಿಯಲ್ಲಿ ಕುಳಿತುಕೊಳ್ಳಲು ಬಿಡುವುದಿಲ್ಲವೆಂದು ಬಹಿರಂಗವಾಗಿಯೇ ನಗರಸಭೆ ಬಿಜೆಪಿ ಸದಸ್ಯರು ಹೇಳಿಕೊಂಡಿದ್ದರು. ಕಚೇರಿಗೆ ಬೀಗ ಹಾಕುವುದಾಗಿ ತಿಳಿಸಿದ್ದರು. ಪ್ರವಾಸದಿಂದ ನಗರಕ್ಕೆ ಹಿಂದಿರುಗಿದ ಬಳಿಕ ನಗರದ ಕುವೆಂಪು ಕಲಾಮಂದಿರದಲ್ಲಿ ಆ.20 ರಂದು ನಡೆದ ಜಿಲ್ಲಾ ಜಾನಪದ 4ನೇ ಸಮ್ಮೇಳದ ಕಾರ್ಯಕ್ರಮದಲ್ಲಿ ಶಾಸಕ ಹೆಚ್.ಡಿ.ತಮ್ಮಯ್ಯ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ ಮೂಲಕ ಮೊದಲ ಬಾರಿಗೆ ಕಾಣಿಸಿಕೊಂಡರು. ಕಾರ್ಯಕ್ರಮ ಮುಗಿದ ಬಳಿಕ ಕಚೇರಿಗೆ ತೆರಳದೆ ಮನೆಗೆ ಹೋಗಿದ್ದರು.
ಮರುದಿನ ಕಚೇರಿಗೂ ಬರಲಿಲ್ಲ. ಇತ್ತ ಜಿಲ್ಲಾ ಬಿಜೆಪಿ ನಗರಸಭೆ ಸದಸ್ಯರು ಅಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಪಕ್ಷದ ನಿಯಮ ಉಲ್ಲಂಘನೆ ಮಾಡಿರುವುದಲ್ಲಿದೆ. ಪಕ್ಷಕ್ಕೆ ಮುಜುಗರಕ್ಕೊಳಗಾಗುವಂತೆ ಮಾಡಿದ್ದಾರೆಂದು ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ. ಕಲ್ಲುರಡಪ್ಪ ವರಸಿದ್ಧಿ ವೇಣುಗೋಪಾಲ್, ಅವರನ್ನು ಪಕ್ಷದಿಂದ ಅಮಾನತುಗೊಳಿಸಿರುವುದಾಗಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವರಸಿದ್ಧಿ ಪಕ್ಷದಿಂದ ಅಮಾನತುಗೊಂಡರು. ಬಿಜೆಪಿ ಸದಸ್ಯರ ಆಕ್ರೋಶದ ನಡುವೆಯೂ ಇದ್ಯಾವುದಕ್ಕೂ ಜಗ್ಗದಿರುವ ವರಸಿದ್ಧಿ ವೇಣುಗೋಪಾಲ್ ಅಧ್ಯಕ್ಷ ಗಾದಿಯಿಂದ ಕೆಳಗಿಳಿಯಲು ಮುಂದಾಗಲಿಲ್ಲ. ಇದರಿಂದ ಬಿಜೆಪಿ ಸದಸ್ಯರು ಅವಿಶ್ವಾಸ ನಿರ್ಣಾಯಕ್ಕೆ ಮುಂದಾಗಿದ್ದು, ಈ ಸಂಬಂಧ ನಗರಸಭೆ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದ್ದಾರೆ.
ನಿನ್ನೆ ನಗರಸಭೆಗೆ ತೆರಳಿದ ಬಿಜೆಪಿ ಪಕ್ಷದ ಸದಸ್ಯರು ಅಧ್ಯಕ್ಷರ ಕಚೇರಿಯಲ್ಲಿನ ಹೈಟೆಕ್ ಕುರ್ಚಿ ಬದಲಾಯಿಸಿ, ಸಾಧಾರಣ ಖುರ್ಚಿಯಲ್ಲಿ ಇಟ್ಟು ಅಧ್ಯಕ್ಷರು ಅಂದು ಹೇಗಿದ್ದರೂ, ಈಗ ಹೇಗಿದ್ದಾರೆಂದು ಅಣಕ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಕಚೇರಿಗೆ ಬೀಗವನ್ನು ಹಾಕಿದ್ದಾರೆ. ಈ ಹಿನ್ನಲೆ ನಗರಸಭೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g