ಎಫ್ಐಆರ್ ದಾಖಲಿಸುವ ಮೊದಲೇ ದೋಚಿದ್ದ ಚಿನ್ನಾಭರಣ ವಾಪಸ್ ತಂದಿಟ್ಟ ಕಳ್ಳರು
1 min read
ಪೊಲೀಸರು ಎಫ್ಐಆರ್ ದಾಖಲಿಸುವ ಮೊದಲೇ ಕಳ್ಳರೇ ಬಂದು ದೋಚಿದ್ದ ನಾಲ್ಕು ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ವಾಪಸ್ ಮನೆ ಬಾಗಿಲಿಗೆ ತಂದಿಟ್ಟ ಘಟನೆ ಚಿಕ್ಕಮಗಳೂರು ನಗರದ ಅರವತ್ತು ಅಡಿ ರಸ್ತೆಯ ಎರಡನೇ ಕ್ರಾಸ್ ನಲ್ಲಿ ನಡೆದಿದೆ.
ಪ್ರಕರಣ ದಾಖಲಿಸುವ ಮೊದಲು ಕಳ್ಳತನ ನಡೆದ ಮನೆಯ ಬಳಿಗೆ ಪೊಲೀಸರು ಬಂದ ವಿಷಯ ತಿಳಿದ ಕಳ್ಳರು ತಾವೇ ಮನೆ ಬಳಿ ಬಂದು ದೋಚಿದ್ದ ನಾಲ್ಕು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣವನ್ನು ಮನೆ ಹೊರಗಿದ್ದ ಶೂ ಒಳಗೆ ಇಟ್ಟು ಪರಾರಿ ಆಗಿರುವ ಘಟನೆ ಚಿಕ್ಕಮಗಳೂರು ನಗರದ 60 feet ರಸ್ತೆ ಎರಡನೇ ಕ್ರಾಸ್ ನಲ್ಲಿ ನಡೆದಿದೆ. ಮೊಹಮ್ಮದ್ ಮುಗ್ಶಿರ್ ಎಂಬಾತ ತಮ್ಮ ಮನೆಯಲ್ಲಿದ್ದ ಸುಮಾರು ನಾಲ್ಕು ಲಕ್ಷದ ಚಿನ್ನಾಭರಣ ಕಳುವಾಗಿದೆ ಎಂದು ಬಸವನಹಳ್ಳಿ ಠಾಣೆಗೆ ದೂರು ನೀಡಲು ಆಗಮಿಸುತ್ತಿದ್ದಂತೆ ಕಾರ್ಯ ಪ್ರವೃತ್ತರಾದ ಸಬ್ ಇನ್ಸ್ಪೆಕ್ಟರ್ ಬಾಬುದ್ದೀನ್ ಹಾಗೂ ತಂಡ ಎಫ್ಐಆರ್ ದಾಖಲಿಸುವ ಮೊದಲೇ ಕಳ್ಳತನ ನಡೆದ ಮನೆ ಬಳಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಜೊತೆ ತೆರಳಿ ಚೋರರ ಜಾಡು ಹಿಡಿಯಲು ಮುಂದಾಗುತ್ತಾರೆ. ಈ ವೇಳೆ ಸಿಕ್ಕಿ ಬೀಳುವ ಭಯದಲ್ಲಿ ಕಳ್ಳರು ಕಳ್ಳತನ ಮಾಡಿದ್ದ ಚಿನ್ನಾಭರಣವನ್ನು ವಾಪಸ್ ತಂದು ಮನೆಯ ಹೊರಗಿದ್ದ ಶೂ ಒಳಗೆ ಇಟ್ಟು ಪರಾರಿಯಾಗಿದ್ದಾರೆ. ಇತ್ತ ಆಭರಣ ಮತ್ತೆ ಸಿಕ್ಕಿದ್ದು ಮನೆಯ ಯಜಮಾನ ಹಾಗೂ ಆತನ ತಾಯಿ ನಿಟ್ಟುಸಿರು ಬಿಟ್ಟಿದ್ದಾರೆ. ಪೊಲೀಸರ ತಕ್ಷಣದ ಸ್ಪಂದನೆಗೆ ಧನ್ಯವಾದ ತಿಳಿಸಿದ್ದಾರೆ. ನಗರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ನಡುವೆ ಬಸವನಹಳ್ಳಿ ಪೊಲೀಸರ ಕರ್ತವ್ಯ ಪ್ರಜ್ಞೆಗೆ ಪ್ರಶಂಸೆಗಳು ಕೇಳಿ ಬಂದಿವೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g