ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು-ಚಿಕ್ಕಮಗಳೂರು ಮುಖ್ಯ ರಸ್ತೆಯಲ್ಲಿ ಬಿದ್ದಿರುವ ಭಾರಿ ಪ್ರಮಾಣದ ಗುಂಡಿಗಳನ್ನು ತಕ್ಷಣವೇ ದುರಸ್ತಿ ಮಾಡುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಆಲ್ದೂರು ಬಿಜೆಪಿ ಮಂಡಲದಿಂದ ಬೃಹತ್ ಪಾದಯಾತ್ರೆ ನಡೆಸಿದರು.
ತಾಲೂಕಿನ ಆಲ್ದೂರು ಗ್ರಾಮದಿಂದ ಚಾಲನೆ ಪಡೆದ ಈ ಪಾದಯಾತ್ರೆಯ ಆರಂಭಕ್ಕೂ ಮುನ್ನ, ಕಾರ್ಯಕರ್ತರು ರಸ್ತೆಯ ನಡುಭಾಗದಲ್ಲಿದ್ದ ಬೃಹತ್ ಗುಂಡಿಯೊಳಗೆ ಬಾಳೆಗಿಡ ನೆಡುವ ಮೂಲಕ ಆಡಳಿತಾರೂಢ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ವಿನೂತನವಾಗಿ ಆಕ್ರೋಶ ಹೊರಹಾಕಿದರು.
ಶಾಸಕರ ವಿರುದ್ಧ ‘ಗುಂಡಿಗಳ ಸರದಾರರು’ ಎಂದು ವ್ಯಂಗ್ಯ
ಚಿಕ್ಕಮಗಳೂರು-ಆಲ್ದೂರು-ಬಾಳೆಹೊನ್ನೂರು-ಶೃಂಗೇರಿ ಸಂಪರ್ಕಿಸುವ ಮುಖ್ಯ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸವಾರರು ಪ್ರತಿದಿನ ಜೀವ ಕೈಯಲ್ಲಿಡಿದು ಸಂಚರಿಸುವಂತಾಗಿದೆ. ಈ ಭಾಗದ ಶಾಸಕರಾದ ರಾಜೇಗೌಡ ಹಾಗೂ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಮುಖಂಡರು, “ಶಾಸಕರು ರಸ್ತೆ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ‘ಗುಂಡಿಗಳ ಸರದಾರರು’ ಎನಿಸಿಕೊಂಡಿದ್ದಾರೆ” ಎಂದು ತೀವ್ರವಾಗಿ ವ್ಯಂಗ್ಯವಾಡಿದರು.
”ಮಳೆಗಾಲ ಬಂದಾಗ ಬೇಸಿಗೆಯಲ್ಲಿ ಕೆಲಸ ಮಾಡುತ್ತೇವೆ ಎನ್ನುತ್ತಾರೆ, ಆದರೆ ಬೇಸಿಗೆ ಬಂದರೂ ಯಾವುದೇ ರಸ್ತೆ ದುರಸ್ತಿ ಕಾರ್ಯ ಕೈಗೊಂಡಿಲ್ಲ, ಎಂದು ಪ್ರತಿಭಟನಾಕಾರರು ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.
18 ಕಿ.ಮೀ. ಸುದೀರ್ಘ ಪಾದಯಾತ್ರೆ
ಆಲ್ದೂರು ಹೋಬಳಿಯಿಂದ ಆರಂಭವಾದ ಈ 18 ಕಿಲೋಮೀಟರ್ ಪಾದಯಾತ್ರೆಯು ಚಿಕ್ಕಮಗಳೂರಿನ ಪ್ರಸಿದ್ಧ ಆಜಾದ್ ಪಾರ್ಕ್ನಲ್ಲಿ ಸಭಾ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಳ್ಳಲಿದೆ. ನೂರಾರು ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯ ಸಾರ್ವಜನಿಕರು ಭಾಗವಹಿಸಿದ್ದು, ಶೀಘ್ರವೇ ರಸ್ತೆ ಡಾಂಬರೀಕರಣ ಮಾಡದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಈ ವೇಳೆ ಎಚ್ಚರಿಸಿದರು.


