ಚಿಕ್ಕಮಗಳೂರು: ಅಂಡರ್‌ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ಗುಣಗಾನ; ತಮಿಳುನಾಡು ಮೂಲದ ಬಸ್ ತಡೆದ ಹಿಂದೂ ಸಂಘಟನೆ

Spread the love

 

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅಂಡರ್‌ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂನನ್ನ ಹೀರೋ ರೀತಿ ಬಿಂಬಿಸಿದ್ದ ತಮಿಳುನಾಡು ಮೂಲದ ಖಾಸಗಿ ಬಸ್ಸೊಂದನ್ನು ಹಿಂದೂ ಸಂಘಟನೆಗಳ ಕಾರ್ಯಕರ್ತರು ತಡೆದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.

​ತಮಿಳುನಾಡು ನೋಂದಣಿ ಹೊಂದಿರುವ ಖಾಸಗಿ ಬಸ್ಸೊಂದು ಚಿಕ್ಕಮಗಳೂರು ನಗರಕ್ಕೆ ಆಗಮಿಸಿತ್ತು. ಈ ಬಸ್ಸಿನ ಮೇಲೆ ಮುಂಬೈ ಸರಣಿ ಸ್ಫೋಟದ ಸಂಚುಕೋರ, ಭೂಗತ ಲೋಕದ ಕುಖ್ಯಾತ ಅಪರಾಧಿ ದಾವೂದ್ ಇಬ್ರಾಹಿಂನ ಫೋಟೋ ಹಾಗೂ ಆತನನ್ನು ಹೊಗಳುವಂತಹ ಬರಹಗಳನ್ನು ಹಾಕಲಾಗಿತ್ತು. ಇದನ್ನು ಗಮನಿಸಿದ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರು ನಗರದ ಎನ್.ಎಂ.ಸಿ. (NMC) ಸರ್ಕಲ್ ಬಳಿ ಬಸ್ಸನ್ನು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

​ಬಸ್ಸಿನ ಸುತ್ತಲೂ ಕಾನೂನು ಬಾಹಿರ ಚಟುವಟಿಕೆಗಳನ್ನು ಪ್ರೇರೇಪಿಸುವಂತಹ ಮತ್ತು ಅಪರಾಧ ಲೋಕವನ್ನು ವೈಭವೀಕರಿಸುವಂತಹ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿತ್ತು:

​”ಲೈವ್ ಬೈ ಎ ಗನ್, ಡೈ ಬೈ ಎ ಗನ್” (Live by a gun, Die by a gun) ಎಂಬ ಪ್ರಚೋದನಾಕಾರಿ ಬರಹ.

​ಬಸ್ಸಿನ ಮೇಲೆ “ಕ್ರೈಮ್ ಲಾರ್ಡ್ ಕ್ರಾನಿಕಲ್ಸ್” ಮತ್ತು “ದಾವೂದ್ ದಿ ರಿಯಲ್ ಡಾನ್” ಎಂಬ ಸ್ಟಿಕ್ಕರ್‌ಗಳು.

​ಬಸ್ಸಿನ ಹಿಂಭಾಗದಲ್ಲಿ “ಡಿ ಗ್ಯಾಂಗ್ ಆಫ್ ಮುಂಬೈ” ಎಂದು ಬರೆಸಲಾಗಿತ್ತು.

​ಅಲ್ಲದೆ, ದಾವೂದ್ ಇಬ್ರಾಹಿಂನ ಫೋಟೋಗಳನ್ನು ಹಾಕಿ ಆತನನ್ನು ಒಬ್ಬ ಹೀರೋನಂತೆ ಬರೆಯಲಾಗಿತ್ತು .

​ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ವಿವಾದಾತ್ಮಕ ಬಸ್ಸನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಬಸ್ಸನ್ನು ನಗರದ ಬಸವನಹಳ್ಳಿ ಪೊಲೀಸ್ ಠಾಣೆಯ ಆವರಣಕ್ಕೆ ಕೊಂಡೊಯ್ಯಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ. ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾದ ವ್ಯಕ್ತಿಯನ್ನು ವೈಭವೀಕರಿಸುವುದರ ಹಿಂದೆ ಇರುವ ಉದ್ದೇಶವೇನು ಎಂಬ ಬಗ್ಗೆ ಪೊಲೀಸರು ಚಾಲಕ ಮತ್ತು ಮಾಲೀಕರಿಂದ ಮಾಹಿತಿ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *