ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಾಗಾಲ್ಯಾಂಡ್ ಮೂಲದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಗರದ ಅರವಿಂದ ನಗರ ಬಡಾವಣೆಯಲ್ಲಿ ನಡೆದಿದೆ.
ಮೃತ ಯುವತಿಯನ್ನು ನಾಗಾಲ್ಯಾಂಡ್ ಮೂಲದ ಲುನ್ಸುಲಾ (22) ಎಂದು ಗುರುತಿಸಲಾಗಿದೆ. ಈಕೆ ನಗರದ ಹೊರವಲಯದ ಪ್ರಸಿದ್ಧ ‘ಗ್ಲೋಬಲ್ ವಿಲೇಜ್ ರೆಸಾರ್ಟ್’ನಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಅರವಿಂದ ನಗರದ ಬಾಡಿಗೆ ಮನೆಯಲ್ಲಿ ಲುನ್ಸುಲಾ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತ ಯುವತಿಯ ಪರ್ಸನಲ್ ಡೈರಿಯನ್ನು ಪೊಲೀಸರು ಪರಿಶೀಲಿಸಿದಾಗ, ಅದರಲ್ಲಿ ರಾಜೇಶ್ ಹಾಗೂ ತೇಜಸ್ ಎಂಬುವವರ ಹೆಸರುಗಳು ಪತ್ತೆಯಾಗಿವೆ. ಇವರಿಬ್ಬರೂ ತನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಲುನ್ಸುಲಾ ಡೈರಿಯಲ್ಲಿ ಬರೆದಿದ್ದಾಳೆ ಎನ್ನಲಾಗುತ್ತಿದೆ.
ಈ ಸಂಬಂಧ ಲಶಿಲಾ ಇಂಚುಗರ್ ಎಂಬುವವರು ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. “ಮೊನ್ನೆ ಸಂಜೆ ಕಿವಿಶೆ ಕಿನಿಮಿ ಎಂಬವರ ಜೊತೆ ಮೃತಳು ಅರ್ಧ ಗಂಟೆ ಕಾಲ ಮಾತನಾಡಿದ್ದಳು. ರಾಜೇಶ್ ಮತ್ತು ತೇಜಸ್ ನೀಡುತ್ತಿದ್ದ ಕಿರುಕುಳವೇ ಈ ಸಾವಿಗೆ ಕಾರಣ” ಎಂದು ದೂರಿನಲ್ಲಿ ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ಬಸವನಹಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ















Leave a Reply