ಚಿಕ್ಕಮಗಳೂರು: ಸರ್ಕಾರಿ ಬಸ್ಗಳ ದುಸ್ಥಿತಿ ಮತ್ತು ಪ್ರಯಾಣಿಕರ ಹೈರಾಣಿನ ನಡುವೆ, ಚಿಕ್ಕಮಗಳೂರಿನಲ್ಲಿ ನಡೆದ ಒಂದು ಘಟನೆ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಬಸ್ಸಿನ ಮುರಿದ ಸೀಟಿಗೆ ತನ್ನ ಟವೆಲ್ಲನ್ನೇ ಕಟ್ಟಿ, ವ್ಯವಸ್ಥೆಯ ಮೇಲೆ ವ್ಯಂಗ್ಯವಾಡುವುದರ ಜೊತೆಗೆ ಮುಂದಿನ ಪ್ರಯಾಣಿಕರಿಗೆ ನೆರವಾದ ರೈತನೊಬ್ಬನ ಕಥೆ ಇದು.
ಚಿಕ್ಕಮಗಳೂರು ಡಿಪೋಗೆ ಸೇರಿದ ಮೈಸೂರು ಮಾರ್ಗದ ಬಸ್ಸಿನಲ್ಲಿ ಈ ಘಟನೆ ನಡೆದಿದೆ. ಚಿಕ್ಕಮಗಳೂರು ಮತ್ತು ಹಾಸನ ಮಾರ್ಗ ಮಧ್ಯೆ ಪ್ರಯಾಣಿಸುತ್ತಿದ್ದ ಈ ಬಸ್ಸಿನ ಒಂದು ಸೀಟು ಸಂಪೂರ್ಣವಾಗಿ ಮುರಿದು ಹೋಗಿತ್ತು. ಸೀಟಿನ ಹಿಂಭಾಗದ ಆಸರೆ ಇಲ್ಲದ ಕಾರಣ, ಯಾರೂ ಅಲ್ಲಿ ಕೂರಲು ಸಾಧ್ಯವಾಗುತ್ತಿರಲಿಲ್ಲ. ಬಸ್ ಚಲಿಸುವಾಗ ಆ ಸೀಟಿನಲ್ಲಿ ಕೂತರೆ ಹಿಂದೆ ಬೀಳುವ ಭಯ ಪ್ರಯಾಣಿಕರಲ್ಲಿತ್ತು.
ಬಸ್ ಹತ್ತಿದ ರೈತರೊಬ್ಬರು ಆ ಮುರಿದ ಸೀಟನ್ನು ಕಂಡು ಸುಮ್ಮನಾಗಲಿಲ್ಲ. ತಮ್ಮ ಹೆಗಲ ಮೇಲಿದ್ದ ಟವೆಲ್ ತೆಗೆದು, ಮುರಿದಿದ್ದ ಸೀಟಿನ ರಾಡ್ಗೆ ಭದ್ರವಾಗಿ ಕಟ್ಟಿದರು. ಆ ಟವೆಲ್ ಆಸರೆಯಲ್ಲೇ ಆರಾಮವಾಗಿ ಕುಳಿತು ಪ್ರಯಾಣ ಮಾಡಿದರು. ಅಚ್ಚರಿಯ ವಿಷಯವೆಂದರೆ, ಅವರು ತಮ್ಮ ಇಳಿಯುವ ನಿಲ್ದಾಣ ಬಂದಾಗ ಆ ಟವೆಲ್ ಬಿಚ್ಚದೆ, “ನಂತರ ಬರುವ ಪ್ರಯಾಣಿಕರಿಗೂ ಇದು ಆಸರೆಯಾಗಲಿ, ಸರ್ಕಾರಕ್ಕೆ ಇದು ನನ್ನ ಕಡೆಯಿಂದ ಗಿಫ್ಟ್” ಎಂಬಂತೆ ಅಲ್ಲಿಯೇ ಬಿಟ್ಟು ಹೋದರು.
ಈ ದೃಶ್ಯವನ್ನು ಕಂಡ ಸಹ ಪ್ರಯಾಣಿಕರು ಸರ್ಕಾರದ ‘ಉಚಿತ’ ಯೋಜನೆಗಳ ಬಗ್ಗೆ ವ್ಯಂಗ್ಯವಾಡಿದ್ದಾರೆ. “ಪುಕ್ಕಟ್ಟೆ ಪ್ರಯಾಣದ ಯೋಜನೆಗಳೇನೋ ಜಾರಿಯಾಗಿವೆ, ಆದರೆ ಬಸ್ಗಳ ಸ್ಥಿತಿ ಮಾತ್ರ ಶೋಚನೀಯವಾಗಿದೆ. ಬಸ್ಸು ಎಲ್ಲೂ ಕೆಟ್ಟು ನಿಲ್ಲದಿದ್ದರೆ ಸಾಕು ಎನ್ನುವಂತಾಗಿದೆ” ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Leave a Reply