ಮಲೆನಾಡಿನ ಹಸಿರು ಹೊದಿಕೆಯಂತಿದ್ದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಈಗ ಬೆಂಕಿಯ ಜ್ವಾಲೆಗಳು ಆವರಿಸಿವೆ. ಸುಡುವ ಬಿಸಿಲು ಒಂದೆಡೆಯಾದರೆ, ಕಿಡಿಗೇಡಿಗಳ ದುಷ್ಕೃತ್ಯದಿಂದಾಗಿ ಶೃಂಗೇರಿ ತಾಲೂಕಿನ ಕೆರೆಕಟ್ಟೆ ವಲಯದ ಮಾಣಿಕ್ಯಬೆಟ್ಟ ಮತ್ತು ವಾಲೀಕುಂಜಗಿರಿ ಶ್ರೇಣಿಯ 25ಕ್ಕೂ ಹೆಚ್ಚು ಕಡೆಗಳಲ್ಲಿ ಬೆಂಕಿ ಹತ್ತಿ ಉರಿಯುತ್ತಿದೆ. ಈ ಭೀಕರ ಅನಾಹುತಕ್ಕೆ ನೂರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದ್ದು, ಅಪರೂಪದ ಸಸ್ಯಸಂಪತ್ತು ಹಾಗೂ ನೆಲದಲ್ಲಿ ಗೂಡು ಕಟ್ಟುವ ಅಸಹಾಯಕ ಪಕ್ಷಿ-ಸಂಕಲಗಳು ಬೆಂಕಿಗಾಹುತಿಯಾಗಿವೆ.
ಇಷ್ಟೆಲ್ಲಾ ಅವಾಂತರ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ಗಾಢ ನಿದ್ರೆಯಲ್ಲಿದೆ ಎಂಬ ಆರೋಪ ಕೇಳಿಬರುತ್ತಿದೆ. ಅರಣ್ಯ ವೀಕ್ಷಕರ ನೇಮಕ ಮಾಡದಿರುವುದು, ಬೆಂಕಿ ನಿಯಂತ್ರಣ ರೇಖೆಗಳನ್ನು ನಿರ್ಮಿಸದಿರುವುದು ಇಲಾಖೆಯ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ ಎಂದು ಸ್ಥಳೀಯರು ಕಿಡಿಕಾರುತ್ತಿದ್ದಾರೆ. ಕಳೆದ ಒಂದು ವಾರದಿಂದ ಕಾಡು ಹೊತ್ತಿ ಉರಿಯುತ್ತಿದ್ದರೂ ಕಾರ್ಕಳ ಡಿಎಫ್ಓ ಸೇರಿದಂತೆ ಯಾವೊಬ್ಬ ಹಿರಿಯ ಅಧಿಕಾರಿಯೂ ಇತ್ತ ತಲೆ ಹಾಕಿಲ್ಲ ಎಂಬುದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ನಾಲ್ಕು ಜಿಲ್ಲೆಗಳ ಗಡಿ ಹಂಚಿಕೊಂಡಿರುವ ಈ ಸೂಕ್ಷ್ಮ ಪರಿಸರ ವಲಯವನ್ನು ಉಳಿಸಿಕೊಳ್ಳಲು ಅರಣ್ಯ ಸಚಿವರು ಈಗಲಾದರೂ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂಬ ಆಗ್ರಹ ಕೇಳಿ ಬಂದಿದೆ.












Leave a Reply