ಚಿಕ್ಕಮಗಳೂರು: ಸಂತ ಜೋಸೆಫರ ಚರ್ಚ್ನಲ್ಲಿ ಅಕ್ರಮ ಮೆಗಾ ಲಕ್ಕಿ ಡ್ರಾ ಆರೋಪ: ₹2.5 ಕೋಟಿ ಸಂಗ್ರಹದ ವಿರುದ್ಧ ಡಿಸಿ, ಎಸ್ಪಿಗೆ ದೂರು
ಕಾಫಿನಾಡು ಚಿಕ್ಕಮಗಳೂರಿನ ಸಂತ ಜೋಸೆಫರ ಪ್ರಧಾನಾಲಯದ ವತಿಯಿಂದ ಸಮುದಾಯ ಭವನ ನಿರ್ಮಾಣದ ನೆಪದಲ್ಲಿ ಜಿಲ್ಲಾಡಳಿತದ ಅನುಮತಿಯಿಲ್ಲದೆ ಬರೋಬ್ಬರಿ ₹2.5 ಕೋಟಿ ಮೌಲ್ಯದ ಭಾರಿ ‘ಮೆಗಾ ಲಕ್ಕಿ ಡ್ರಾ’ ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ನಿಯಮಬಾಹಿರವಾಗಿ ಸಾರ್ವಜನಿಕರಿಗೆ ಟಿಕೆಟ್ ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ಸಂಗ್ರಹಿಸಲಾಗುತ್ತಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಿ ಡ್ರಾ ಪ್ರಕ್ರಿಯೆಗೆ ತಕ್ಷಣ ತಡೆ ನೀಡಬೇಕೆಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಬೆನೆಡಿಕ್ಟ್ ಜೇಮ್ಸ್ ಅವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಧಿಕೃತ ದೂರು ನೀಡಿದ್ದಾರೆ.
ಪ್ರಧಾನಾಲಯದ ಧರ್ಮಗುರುಗಳಾದ ಶಾಂತರಾಜು ಆರ್. ಅವರ ನೇತೃತ್ವದಲ್ಲಿ ಈ ಲಕ್ಕಿ ಡ್ರಾ ಆಯೋಜನೆಯಾಗಿದ್ದು, ಪ್ರತಿ ಟಿಕೆಟ್ಗೆ ₹1,000 ನಿಗದಿಪಡಿಸಿ ಮಾರಾಟ ಮಾಡಲಾಗುತ್ತಿದೆ. ಸೆಪ್ಟೆಂಬರ್ 8ರ ಮರಿಯಾ ಜಯಂತಿಯಂದು ಜುಬಿಲಿ ಹಾಲ್ನಲ್ಲಿ ಡ್ರಾ ನಡೆಯಲಿದ್ದು, ವಿಜೇತರಿಗೆ ಆಲ್ಟೊ ಕಾರು, ಎಲೆಕ್ಟ್ರಿಕ್ ವೆಸ್ಪಾ ಸ್ಕೂಟರ್, ಮೋಟಾರ್ ಬೈಕ್, ವಾಷಿಂಗ್ ಮೆಷಿನ್, ಸೈಕಲ್ ಮುಂತಾದ ಆಕರ್ಷಕ ಬಹುಮಾನಗಳನ್ನು ನೀಡುವುದಾಗಿ ಪ್ರಚಾರ ಮಾಡಲಾಗಿದೆ. ಆದರೆ, ಮಾಹಿತಿ ಹಕ್ಕು ಕಾಯ್ದೆಯಡಿ (RTI) ಜಿಲ್ಲಾಡಳಿತ ನೀಡಿದ ಅಧಿಕೃತ ಮಾಹಿತಿಯ ಪ್ರಕಾರ, ಈ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಯಾವುದೇ ಪೂರ್ವಾನುಮತಿ ಪಡೆದಿಲ್ಲ ಎಂಬುದು ಬಯಲಾಗಿದೆ.
ಕರ್ನಾಟಕ ಲಾಟರಿ ನಿಯಂತ್ರಣ ಕಾಯ್ದೆಯ ಪ್ರಕಾರ ಯಾವುದೇ ಖಾಸಗಿ ಲಾಟರಿ ಅಥವಾ ಲಕ್ಕಿ ಡ್ರಾ ಮೂಲಕ ಹಣ ಸಂಗ್ರಹಿಸುವುದು ಸಂಪೂರ್ಣ ನಿಷೇಧಕ್ಕೊಳಪಟ್ಟಿದೆ. ಸಮುದಾಯ ಭವನ ನಿರ್ಮಾಣದ ಉದ್ದೇಶವಿದ್ದರೂ, ಸರ್ಕಾರದ ಅನುಮತಿಯಿಲ್ಲದೆ ಇಂತಹ ಯೋಜನೆ ನಡೆಸುವುದು ಕಾನೂನುಬಾಹಿರವಾಗಿದೆ. ಆದ್ದರಿಂದ ಮುದ್ರಿಸಲಾದ ಒಟ್ಟು ಟಿಕೆಟ್ಗಳು, ಸಂಗ್ರಹವಾದ ಹಣ, ಬ್ಯಾಂಕ್ ವಹಿವಾಟು ಹಾಗೂ ಬಹುಮಾನಗಳ ಹಣಕಾಸು ಲೆಕ್ಕಪತ್ರಗಳ ಕುರಿತು ಪೂರ್ಣ ಪ್ರಮಾಣದ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅರ್ಜಿದಾರರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.





