मौसम क्रिकेट ऑपरेशन सिंदूर क्रिकेट स्पोर्ट्स बॉलीवुड जॉब - एजुकेशन बिजनेस लाइफस्टाइल देश विदेश राशिफल आध्यात्मिक अन्य

ಚಿಕ್ಕಮಗಳೂರು: ಬಿಸಿಲ ಧಗೆಗೆ ಹೊತ್ತಿ ಉರಿದ ಚುರ್ಚೆಗುಡ್ಡ ಮೀಸಲು ಅರಣ್ಯ; 15 ಎಕರೆ ಅರಣ್ಯ ಭಸ್ಮ

 

​ಚಿಕ್ಕಮಗಳೂರು: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬಿಸಿಲ ತಾಪಕ್ಕೆ ಇದೀಗ ಕಾಡ್ಗಿಚ್ಚಿನ ಆತಂಕ ಎದುರಾಗಿದೆ. ನಗರದ ಹೊರವಲಯದ ಮೀಸಲು ಅರಣ್ಯ ಪ್ರದೇಶದಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಸುಮಾರು 15 ಎಕರೆಗೂ ಅಧಿಕ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ.

​ಚಿಕ್ಕಮಗಳೂರು ತಾಲೂಕಿನ ಚುರ್ಚೆಗುಡ್ಡ ಮೀಸಲು ಅರಣ್ಯ ಹಾಗೂ ಹೊಸ ಕೋರ್ಟ್ ಹಿಂಭಾಗದಲ್ಲಿರುವ ನ್ಯಾಯಗಿರಿ ಮೀಸಲು ಅರಣ್ಯ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಬೇಸಿಗೆಯ ಬಿರು ಬಿಸಿಲಿನಿಂದಾಗಿ ಒಣಗಿದ್ದ ಗಿಡಗಂಟೆಗಳಿಗೆ ಬೆಂಕಿ ತಗುಲಿದ ಪರಿಣಾಮ, ಕ್ಷಣಾರ್ಧದಲ್ಲಿ ಬೆಂಕಿ ಇಡೀ ಗುಡ್ಡಕ್ಕೆ ವ್ಯಾಪಿಸಿದೆ.

​ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಅರಣ್ಯ ಪ್ರದೇಶದ ಎತ್ತರದ ಭಾಗಗಳಿಗೆ ವಾಹನಗಳು ಹೋಗಲು ಸಾಧ್ಯವಾಗದ ಕಾರಣ, ಸಿಬ್ಬಂದಿಗಳು ಮರದ ಹಸಿ ಟೊಂಗೆಗಳನ್ನು ಬಳಸಿಯೇ ಬೆಂಕಿ ಆರಿಸಲು ಪ್ರಯತ್ನಿಸಿದ್ದಾರೆ  .

​”ಬಿಸಿಲ ತೀವ್ರತೆ ಹೆಚ್ಚಿರುವುದರಿಂದ ಬೆಂಕಿ ವೇಗವಾಗಿ ಹರಡುತ್ತಿದೆ. ಗಾಳಿಯ ವೇಗವೂ ಹೆಚ್ಚಿರುವುದು ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಆದರೂ ಬೆಂಕಿ ನಿಯಂತ್ರಿಸಲು  ಪ್ರಯತ್ನ ಮಾಡಲಾಗುತ್ತಿದೆ,”

​ಈ ಘಟನೆಯಿಂದಾಗಿ ಅರಣ್ಯದಲ್ಲಿದ್ದ ಅಮೂಲ್ಯ ಗಿಡಮರಗಳು ಹಾಗೂ ಸಣ್ಣಪುಟ್ಟ ವನ್ಯಜೀವಿಗಳಿಗೆ ಹಾನಿಯಾಗಿರುವ ಆತಂಕ ಎದುರಾಗಿದೆ. ಬೆಂಕಿ ಹರಡದಂತೆ ತಡೆಯಲು ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ.

ಚಿಕ್ಕಮಗಳೂರು: ಅಂಡರ್‌ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ಗುಣಗಾನ; ತಮಿಳುನಾಡು ಮೂಲದ ಬಸ್ ತಡೆದ ಹಿಂದೂ ಸಂಘಟನೆ

 

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅಂಡರ್‌ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂನನ್ನ ಹೀರೋ ರೀತಿ ಬಿಂಬಿಸಿದ್ದ ತಮಿಳುನಾಡು ಮೂಲದ ಖಾಸಗಿ ಬಸ್ಸೊಂದನ್ನು ಹಿಂದೂ ಸಂಘಟನೆಗಳ ಕಾರ್ಯಕರ್ತರು ತಡೆದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.

​ತಮಿಳುನಾಡು ನೋಂದಣಿ ಹೊಂದಿರುವ ಖಾಸಗಿ ಬಸ್ಸೊಂದು ಚಿಕ್ಕಮಗಳೂರು ನಗರಕ್ಕೆ ಆಗಮಿಸಿತ್ತು. ಈ ಬಸ್ಸಿನ ಮೇಲೆ ಮುಂಬೈ ಸರಣಿ ಸ್ಫೋಟದ ಸಂಚುಕೋರ, ಭೂಗತ ಲೋಕದ ಕುಖ್ಯಾತ ಅಪರಾಧಿ ದಾವೂದ್ ಇಬ್ರಾಹಿಂನ ಫೋಟೋ ಹಾಗೂ ಆತನನ್ನು ಹೊಗಳುವಂತಹ ಬರಹಗಳನ್ನು ಹಾಕಲಾಗಿತ್ತು. ಇದನ್ನು ಗಮನಿಸಿದ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರು ನಗರದ ಎನ್.ಎಂ.ಸಿ. (NMC) ಸರ್ಕಲ್ ಬಳಿ ಬಸ್ಸನ್ನು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

​ಬಸ್ಸಿನ ಸುತ್ತಲೂ ಕಾನೂನು ಬಾಹಿರ ಚಟುವಟಿಕೆಗಳನ್ನು ಪ್ರೇರೇಪಿಸುವಂತಹ ಮತ್ತು ಅಪರಾಧ ಲೋಕವನ್ನು ವೈಭವೀಕರಿಸುವಂತಹ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿತ್ತು:

​”ಲೈವ್ ಬೈ ಎ ಗನ್, ಡೈ ಬೈ ಎ ಗನ್” (Live by a gun, Die by a gun) ಎಂಬ ಪ್ರಚೋದನಾಕಾರಿ ಬರಹ.

​ಬಸ್ಸಿನ ಮೇಲೆ “ಕ್ರೈಮ್ ಲಾರ್ಡ್ ಕ್ರಾನಿಕಲ್ಸ್” ಮತ್ತು “ದಾವೂದ್ ದಿ ರಿಯಲ್ ಡಾನ್” ಎಂಬ ಸ್ಟಿಕ್ಕರ್‌ಗಳು.

​ಬಸ್ಸಿನ ಹಿಂಭಾಗದಲ್ಲಿ “ಡಿ ಗ್ಯಾಂಗ್ ಆಫ್ ಮುಂಬೈ” ಎಂದು ಬರೆಸಲಾಗಿತ್ತು.

​ಅಲ್ಲದೆ, ದಾವೂದ್ ಇಬ್ರಾಹಿಂನ ಫೋಟೋಗಳನ್ನು ಹಾಕಿ ಆತನನ್ನು ಒಬ್ಬ ಹೀರೋನಂತೆ ಬರೆಯಲಾಗಿತ್ತು .

​ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ವಿವಾದಾತ್ಮಕ ಬಸ್ಸನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಬಸ್ಸನ್ನು ನಗರದ ಬಸವನಹಳ್ಳಿ ಪೊಲೀಸ್ ಠಾಣೆಯ ಆವರಣಕ್ಕೆ ಕೊಂಡೊಯ್ಯಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ. ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾದ ವ್ಯಕ್ತಿಯನ್ನು ವೈಭವೀಕರಿಸುವುದರ ಹಿಂದೆ ಇರುವ ಉದ್ದೇಶವೇನು ಎಂಬ ಬಗ್ಗೆ ಪೊಲೀಸರು ಚಾಲಕ ಮತ್ತು ಮಾಲೀಕರಿಂದ ಮಾಹಿತಿ ಪಡೆಯುತ್ತಿದ್ದಾರೆ.

ಬಾಳೆಹೊನ್ನೂರು: ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಚಕ್ರ ಕಳಚಿದ ಘಟನೆ – ತಪ್ಪಿದ ಭಾರಿ ಅನಾಹುತ!

 

ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಸರ್ಕಾರಿ ಬಸ್ಸೊಂದು ಚಲಿಸುತ್ತಿದ್ದ ವೇಳೆ ಚಕ್ರ ಕಳಚಿ ಬಿದ್ದ ಘಟನೆ ನಡೆದಿದೆ. ಅದೃಷ್ಟವಶಾತ್ ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

​ಬಾಳೆಹೊನ್ನೂರಿನ ಕಾಲಭೈರವೇಶ್ವರ ದೇಗುಲದ ಸಮೀಪ ಬಸ್ ಚಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಚಕ್ರವೊಂದು ಕಳಚಿ ರಸ್ತೆಗೆ ಬಿದ್ದಿದೆ. ಈ ವೇಳೆ ಬಸ್ಸಿನಲ್ಲಿ ಪ್ರಯಾಣಿಕರು ತುಂಬಿದ್ದರು. ಬಸ್ ನಿಯಂತ್ರಣ ಕಳೆದುಕೊಂಡು ಉರುಳುವ ಭೀತಿ ಎದುರಾಗಿತ್ತಾದರೂ, ಚಾಲಕ ಬಸ್ಸನ್ನು ಸುರಕ್ಷಿತವಾಗಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

​ರಸ್ತೆ ಮಧ್ಯೆಯೇ ಬಸ್ಸಿನ ಚಕ್ರ ಕಳಚಿ ಬಿದ್ದಿರುವುದನ್ನು ಕಂಡು ಪ್ರಯಾಣಿಕರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸರ್ಕಾರಿ ಬಸ್ಸುಗಳ ಸ್ಥಿತಿ ಇಷ್ಟು ಹದಗೆಟ್ಟಿದೆಯೇ? ನಮ್ಮ ಪ್ರಾಣದ ಜೊತೆ ಸರ್ಕಾರ ಆಟವಾಡುತ್ತಿದೆ” ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಫಾದರ್ ಮುಲ್ಲರ್ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

 

ಮೂಡಿಗೆರೆ: ​ಬಣಕಲ್ ಕ್ರೈಸ್ತರ ಅಭಿವೃದ್ಧಿ ಸಂಘ (ರಿ.) ಮತ್ತು ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ (ರಿ.) ಇವರುಗಳ ಸಂಯುಕ್ತಾಶ್ರಯದಲ್ಲಿ ಮಂಗಳೂರಿನ ಪ್ರಸಿದ್ಧ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ವತಿಯಿಂದ ಬಣಕಲ್‌ನಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರವು ಮಾರ್ಚ್ 29 ರ ಭಾನುವಾರದಂದು ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 3.30ರ ವರೆಗೆ ಬಣಕಲ್‌ನ ಚರ್ಚ್ ಸಭಾ ಭವನದಲ್ಲಿ ನಡೆಯಲಿದೆ.
​ಶಿಬಿರದಲ್ಲಿ ಸಾರ್ವಜನಿಕರಿಗೆ ವೈವಿಧ್ಯಮಯ ವೈದ್ಯಕೀಯ ಸೇವೆಗಳು ಲಭ್ಯವಿದ್ದು, ಸಾಮಾನ್ಯ ಕಾಯಿಲೆಗಳ ತಪಾಸಣೆಯ ಜೊತೆಗೆ ಇ.ಸಿ.ಜಿ., ಬಿ.ಪಿ. ಹಾಗೂ ಸಕ್ಕರೆ ಕಾಯಿಲೆಯ ಪರೀಕ್ಷೆಗಳನ್ನು ಉಚಿತವಾಗಿ ಮಾಡಿಸಿಕೊಳ್ಳಬಹುದು. ಸ್ತ್ರೀ ರೋಗ ತಪಾಸಣೆ ಮತ್ತು ಸಂತಾನೋತ್ಪತ್ತಿ ಆರೋಗ್ಯಕ್ಕೆ ಸಂಬಂಧಿಸಿದ ಸಮಾಲೋಚನೆಗಳು ಮಧ್ಯಾಹ್ನ 12.30ರ ನಂತರ ಲಭ್ಯವಿರುತ್ತವೆ. ಇವುಗಳೊಂದಿಗೆ ಕಣ್ಣಿನ ತಪಾಸಣೆ ನಡೆಸಿ ಅಗತ್ಯವಿದ್ದಲ್ಲಿ ಕನ್ನಡಕಗಳನ್ನು ನೀಡಲಾಗುವುದು ಹಾಗೂ ಮಕ್ಕಳ ತಪಾಸಣೆ ಮತ್ತು ಚರ್ಮರೋಗ ತಪಾಸಣೆಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
​’ಉತ್ತಮ ಆರೋಗ್ಯ ಉತ್ತಮ ಜೀವನ’ ಎಂಬ ಧ್ಯೇಯದೊಂದಿಗೆ ಆಯೋಜಿಸಲಾಗಿರುವ ಈ ಶಿಬಿರದ ನೇತೃತ್ವವನ್ನು ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಂಯೋಜಕರು ಹಾಗೂ ಕರ್ನಾಟಕ ಸರ್ಕಾರದ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಹರ್ಷ ಮೆಲ್ವಿನ್ ಲಸ್ರಾದೋ ಅವರು ವಹಿಸಿದ್ದಾರೆ. ಸ್ಥಳೀಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಉಚಿತ ಆರೋಗ್ಯ ಸೇವೆಯ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಆಯೋಜಕರು ವಿನಂತಿಸಿದ್ದಾರೆ.

 

ಚಿಕ್ಕಮಗಳೂರು: ನಾಗಾಲ್ಯಾಂಡ್ ಮೂಲದ ಯುವತಿ ಆತ್ಮಹತ್ಯೆ;

 

​ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಾಗಾಲ್ಯಾಂಡ್ ಮೂಲದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಗರದ ಅರವಿಂದ ನಗರ ಬಡಾವಣೆಯಲ್ಲಿ ನಡೆದಿದೆ.

ಮೃತ ಯುವತಿಯನ್ನು ನಾಗಾಲ್ಯಾಂಡ್ ಮೂಲದ ಲುನ್ಸುಲಾ (22) ಎಂದು ಗುರುತಿಸಲಾಗಿದೆ. ಈಕೆ ನಗರದ ಹೊರವಲಯದ ಪ್ರಸಿದ್ಧ ‘ಗ್ಲೋಬಲ್ ವಿಲೇಜ್ ರೆಸಾರ್ಟ್’ನಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಅರವಿಂದ ನಗರದ ಬಾಡಿಗೆ ಮನೆಯಲ್ಲಿ ಲುನ್ಸುಲಾ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೃತ ಯುವತಿಯ ಪರ್ಸನಲ್ ಡೈರಿಯನ್ನು ಪೊಲೀಸರು ಪರಿಶೀಲಿಸಿದಾಗ, ಅದರಲ್ಲಿ ರಾಜೇಶ್ ಹಾಗೂ ತೇಜಸ್ ಎಂಬುವವರ ಹೆಸರುಗಳು ಪತ್ತೆಯಾಗಿವೆ. ಇವರಿಬ್ಬರೂ ತನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಲುನ್ಸುಲಾ ಡೈರಿಯಲ್ಲಿ ಬರೆದಿದ್ದಾಳೆ ಎನ್ನಲಾಗುತ್ತಿದೆ.

ಈ ಸಂಬಂಧ ಲಶಿಲಾ ಇಂಚುಗರ್ ಎಂಬುವವರು ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. “ಮೊನ್ನೆ ಸಂಜೆ ಕಿವಿಶೆ ಕಿನಿಮಿ ಎಂಬವರ ಜೊತೆ ಮೃತಳು ಅರ್ಧ ಗಂಟೆ ಕಾಲ ಮಾತನಾಡಿದ್ದಳು. ರಾಜೇಶ್ ಮತ್ತು ತೇಜಸ್ ನೀಡುತ್ತಿದ್ದ ಕಿರುಕುಳವೇ ಈ ಸಾವಿಗೆ ಕಾರಣ” ಎಂದು ದೂರಿನಲ್ಲಿ ಶಂಕಿಸಲಾಗಿದೆ.

ಘಟನಾ ಸ್ಥಳಕ್ಕೆ ಬಸವನಹಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ

ಐಸ್ ಕ್ರೀಮ್ ವಾಹನ ಪಲ್ಟಿ: ಸ್ಥಳೀಯರಿಂದ ಚಾಲಕನ ರಕ್ಷಣೆ

 

ಮೂಡಿಗೆರೆ: ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಕ್ಮಕ್ಕಿ ಬಳಿ ಐಸ್ ಕ್ರೀಮ್ ಸಾಗಿಸುತ್ತಿದ್ದ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ. ಮೂಡಿಗೆರೆಯಿಂದ ಕೊಟ್ಟಿಗೆಹಾರದ ಕಡೆಗೆ ಸಾಗುತ್ತಿದ್ದ ಈ ವಾಹನ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದೆ.

ಘಟನೆಯ ಪರಿಣಾಮ ವಾಹನವು ರಸ್ತೆ ಬದಿಗೆ ಉರುಳಿ ಬಿದ್ದಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಗಾಯಾಳು ಚಾಲಕನಿಗೆ ತಕ್ಷಣ ನೆರವು ನೀಡಿದರು. ಬಳಿಕ ಅವನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಯಿತು.

ಈ ಘಟನೆ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಶೃಂಗೇರಿ: ಮಳೆಯ ನಡುವೆ ನಿಯಂತ್ರಣ ತಪ್ಪಿ ಪಿಕಪ್ ಪಲ್ಟಿ – ಚಾಲಕ ಪ್ರಾಣಾಪಾಯದಿಂದ ಪಾರು

 

ಶೃಂಗೇರಿ ತಾಲೂಕಿನ ಅಡ್ಡಗದ್ದೆ ಪ್ರದೇಶದಲ್ಲಿ ಭಾರಿ ಮಳೆಯ ನಡುವೆ ಪಿಕಪ್ ವಾಹನ ಪಲ್ಟಿಯಾಗಿರುವ ಘಟನೆ ನಡೆದಿದೆ. ಮಲೆನಾಡು ಭಾಗದಲ್ಲಿ ಇತ್ತೀಚೆಗೆ ವರುಣನ ಆರ್ಭಟ ಹೆಚ್ಚಾಗಿದ್ದು, ನಿರಂತರ ಮಳೆಯಿಂದ ರಸ್ತೆ ಜಾರಿಕೆಯಾಗಿರುವುದು ಅಪಘಾತಕ್ಕೆ ಕಾರಣವಾಗಿದೆ.

ಸಂಜೆ ಸಮಯದಲ್ಲಿ ಸಾಗುತ್ತಿದ್ದ ಪಿಕಪ್ ವಾಹನವು ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ರಸ್ತೆಯಲ್ಲೇ ಉರುಳಿ ಬಿದ್ದಿದೆ. ಅಪಘಾತದ ಪರಿಣಾಮ ವಾಹನ ಸಂಪೂರ್ಣ ಪಲ್ಟಿಯಾಗಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.

ಆದರೆ, ವಾಹನದಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಷ್ಟೇ ಆಗಿವೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಮಳೆಗಾಲದಲ್ಲಿ ರಸ್ತೆಗಳಲ್ಲಿ ಜಾರಿ ಅಪಾಯ ಹೆಚ್ಚಿರುವ ಹಿನ್ನೆಲೆಯಲ್ಲಿ ವಾಹನ ಚಾಲಕರು ಎಚ್ಚರಿಕೆಯಿಂದ ಸಂಚರಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

ಬಡವರಿಗೆ ಆಸರೆಯಾಗಿದ್ದ ಕ್ಯಾಂಟೀನ್ ಸ್ಥಳಾಂತರ: ಎರಡು ದಿನಗಳ ಕಾಲ ಸೇವೆ ಸ್ಥಗಿತ.

 

 

 

ಚಿಕ್ಕಮಗಳೂರು ನಗರದ ಐ.ಜಿ. ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಂದಿರಾ ಕ್ಯಾಂಟೀನ್ ಅನ್ನು ಇದೀಗ ಸ್ಥಳಾಂತರಗೊಳಿಸಲಾಗಿದೆ. ನೂತನ ಬಸ್ ನಿಲ್ದಾಣದ ಕಾಮಗಾರಿ ಭರದಿಂದ ಸಾಗುತ್ತಿರುವುದರಿಂದ ಈ ಅನಿವಾರ್ಯ ಬದಲಾವಣೆ ಮಾಡಲಾಗಿದ್ದು, ಇನ್ಮುಂದೆ ಕೆ.ಎಂ. ರಸ್ತೆಯ ಶ್ರೀ ಕತ್ರಿಮಾರಮ್ಮ ದೇವಸ್ಥಾನದ ಎದುರು ಇರುವ ನಗರಸಭೆ ಮಳಿಗೆಯ ಕೆಳಭಾಗದ ಸೆಲ್ಲಾರ್‌ನಲ್ಲಿ ಕ್ಯಾಂಟೀನ್ ಕಾರ್ಯನಿರ್ವಹಿಸಲಿದೆ. ಈ ಬದಲಾವಣೆಯ ಪ್ರಕ್ರಿಯೆ ನಡೆಯುತ್ತಿರುವುದರಿಂದ ಮಾರ್ಚ್ 25 ಮತ್ತು 26ರಂದು ಯಾವುದೇ ರೀತಿಯ ಆಹಾರ ಅಥವಾ ಉಪಹಾರದ ವ್ಯವಸ್ಥೆ ಇರುವುದಿಲ್ಲ ಎಂದು ನಗರಸಭೆ ಸ್ಪಷ್ಟಪಡಿಸಿದೆ. ​ಪ್ರತಿನಿತ್ಯ ಅಂದಾಜು 1500 ಮಂದಿಗೆ ಹಸಿವು ನೀಗಿಸುತ್ತಿದ್ದ ಈ ಕೇಂದ್ರವು, ಸದ್ಯದ ಬದಲಾವಣೆಯಿಂದಾಗಿ ಬಡವರ ಪಾಲಿಗೆ ಕೊಂಚ ಸಮಸ್ಯೆಯನ್ನುಂಟು ಮಾಡಿದೆ. ಬೆಳಗ್ಗೆ ಮತ್ತು ಮಧ್ಯಾಹ್ನ ತಲಾ 600 ಹಾಗೂ ರಾತ್ರಿ 300 ಜನರಂತೆ ಒಟ್ಟು ಸಾವಿರಾರು ಜನರು ಈ ಕ್ಯಾಂಟೀನ್ ಮೇಲೆ ಅವಲಂಬಿತರಾಗಿದ್ದರು. ಸ್ಥಳ ಬದಲಾವಣೆಯಿಂದಾಗಿ ಸ್ವಲ್ಪ ಗೊಂದಲ ಉಂಟಾಗುವ ಸಾಧ್ಯತೆ ಇದ್ದರೂ, ಮಾರ್ಚ್ 27ರಿಂದ ಹೊಸ ಜಾಗದಲ್ಲಿ ಎಂದಿನಂತೆ ಸೇವೆ ಲಭ್ಯವಾಗಲಿದೆ. ಸಾರ್ವಜನಿಕರು ಈ ಮಾಹಿತಿಯನ್ನು ಗಮನಿಸಿ, ಬದಲಾದ ಸ್ಥಳದಲ್ಲಿ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಪೌರಾಯುಕ್ತರು ವಿನಂತಿಸಿದ್ದಾರೆ.

ದತ್ತಪೀಠದಲ್ಲಿ ಜಿಯಾರತ್‌ಗೆ ಬ್ರೇಕ್: ಖಬರಸ್ಥಾನ್ ಗೇಟ್ ಬಂದ್ ಮಾಡಿದ್ದಕ್ಕೆ ಮುಸ್ಲಿಂ ಸಮುದಾಯದ ಆಕ್ರೋಶ

 

 

 

ಚಿಕ್ಕಮಗಳೂರು: ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಜಿಯಾರತ್ ಮತ್ತು ಫಾತೇಹಾ ಆಚರಣೆಗಳಿಗೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿರುವುದು ಮುಸ್ಲಿಮರ ಕೆಂಗಣ್ಣಿಗೆ ಗುರಿಯಾಗಿದೆ. ಈ ಹಿಂದೆ ಮುಕ್ತವಾಗಿರುತ್ತಿದ್ದ ಖಬರಸ್ಥಾನ್ ಗೇಟನ್ನು ಈ ಬಾರಿ ಜಿಲ್ಲಾಡಳಿತ ಸಂಪೂರ್ಣವಾಗಿ ಬಂದ್ ಮಾಡಿದ್ದು, ಸಮಾಧಿಗಳ ಬಳಿ ಪ್ರಾರ್ಥನೆ ಸಲ್ಲಿಸಲು ಮತ್ತು ಪೂಜೆ ನೆರವೇರಿಸಲು ಅವಕಾಶ ನೀಡಿಲ್ಲ. ಸರ್ಕಾರದ ಈ ಕ್ರಮದ ವಿರುದ್ಧ ಮುಸ್ಲಿಂ ಸಮುದಾಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತು ಮುಂಚಿತವಾಗಿಯೇ ಮಾಹಿತಿ ನೀಡಿದ್ದರೂ ಸಹ ಜಿಲ್ಲಾಡಳಿತವು ಇವುಗಳನ್ನು ಹೊಸ ಆಚರಣೆಗಳೆಂದು ಪರಿಗಣಿಸಿ ತಡೆ ಹಿಡಿದಿರುವುದು ಪ್ರತಿಭಟನೆಗೆ ಕಾರಣವಾಗಿದೆ. ​ಈ ಹಿನ್ನೆಲೆಯಲ್ಲಿ ದತ್ತಪೀಠದ ಆವರಣದಲ್ಲಿ ಸಮುದಾಯದ ಮುಖಂಡರು ಸುಮಾರು ಮೂರು ಗಂಟೆಗಳ ಕಾಲ ಧರಣಿ ನಡೆಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಯಾವುದೇ ಅಡಚಣೆ ಇಲ್ಲದೆ ಜಿಯಾರತ್ ನಡೆಸಲು ಅವಕಾಶ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ರಾಮಲಿಂಗಾರೆಡ್ಡಿ, ಜಮೀರ್ ಅಹಮದ್ ಹಾಗೂ ಜಿಲ್ಲಾಧಿಕಾರಿ ಮತ್ತು ಎಸ್ಪಿಯವರಿಗೆ ಈಗಾಗಲೇ ದೂರು ಸಲ್ಲಿಸಿ ನ್ಯಾಯ ಒದಗಿಸುವಂತೆ ಮನವಿ ಮಾಡಲಾಗಿದೆ.

ಮೂಡಿಗೆರೆ: ಅನ್ಯಕೋಮಿನ ಅಪ್ರಾಪ್ತರ ಪ್ರೇಮದ ಪ್ರಕರಣ ದೂರು-ಪ್ರತಿದೂರು ದಾಖಲು 

 

 

ಮೂಡಿಗೆರೆ: ಕಾಫಿನಾಡಿನ ಮೂಡಿಗೆರೆ ಪಟ್ಟಣದಲ್ಲಿ ಲವ್ ಜಿಹಾದ್ ಎಂಬ ಆರೋಪವೊಂದು ಕೇಳಿ ಬಂದಿದೆ. ಪಟ್ಟಣದಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ ಸಮುದಾಯದ ಅಪ್ರಾಪ್ತ ಯುವಕ ಮತ್ತು ಎಸ್‌ಎಸ್‌ಎಲ್‌ಸಿ ಓದುತ್ತಿರುವ ಹಿಂದೂ ಸಮುದಾಯದ ಅಪ್ರಾಪ್ತ ಬಾಲಕಿ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, ಇಬ್ಬರೂ ಬೇರೆ ಬೇರೆ ಸಮುದಾಯಕ್ಕೆ ಸೇರಿದವರಾಗಿವುದರಿಂದ, ಅವರ ಪ್ರೇಮದ ವಿಚಾರ ತಿಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ​ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವಕ ನೀಡಿದ ದೂರಿನ ಮೇರೆಗೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಮೂವರು ಹಿಂದೂ ಸಂಘಟನೆ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಘಟನೆಯ ಬೆನ್ನಲ್ಲೇ ಬಾಲಕಿಯ ತಂದೆ ಕೂಡ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ತನ್ನ ಮಗಳ ವಿಚಾರದಲ್ಲಿ ಯುವಕನ ವರ್ತನೆಯನ್ನು ಖಂಡಿಸಿ ದೂರು ನೀಡಿದ್ದಾರೆ. ಈ ದೂರಿನನ್ವಯ ಪೊಲೀಸರು ಅಪ್ರಾಪ್ತ ಮುಸ್ಲಿಂ ಯುವಕನ ವಿರುದ್ಧ ಜೆಜೆ ಕಾಯ್ದೆಯಡಿ (Juvenile Justice Act) ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.