ಸತತ ಆನೆ ದಾಳಿಗೆ ಕಂಗಾಲಾದ ಮಲೆನಾಡು: ಸಂತ್ರಸ್ತ ರೈತರೊಂದಿಗೆ ಅರಣ್ಯ ಸಚಿವರ ಸಮಾಲೋಚನೆ

Spread the love

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಸತತವಾಗಿ ನಡೆಯುತ್ತಿರುವ ಆನೆ ದಾಳಿಗಳು ಜನರನ್ನು ಅತೀವ ಆತಂಕಕ್ಕೆ ತಳ್ಳಿವೆ. ಕಳೆದ ಕೇವಲ ಒಂದು ವರ್ಷದಲ್ಲಿ 13 ಜನರು ಕಾಡುಪ್ರಾಣಿಗಳ ದಾಳಿಗೆ ಬಲಿಯಾಗಿದ್ದು, ಅದರಲ್ಲಿ ಒಂಬತ್ತು ಮಂದಿ ಕಾಡಾನೆಗಳ ಅಬ್ಬರಕ್ಕೆ ಪ್ರಾಣ ಕಳೆದುಕೊಂಡಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿ ತೋರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಕೇವಲ ಅಧಿಕಾರಿಗಳ ವರದಿಗಳಿಗೆ ಸೀಮಿತವಾಗದೆ, ನೇರವಾಗಿ ಸ್ಥಳಕ್ಕೆ ಬಂದು ಸಂತ್ರಸ್ತ ರೈತರು ಮತ್ತು ಬೆಳೆಗಾರರ ಅಳಲನ್ನು ಆಲಿಸಬೇಕು ಎಂಬ ಆಗ್ರಹ ಬಲವಾಗಿ ಕೇಳಿಬಂದಿತ್ತು.

​ಕಳೆದ ಭಾನುವಾರ ಈ ಆಕ್ರೋಶ ತುತ್ತತುದಿಗೆ ತಲುಪಿತ್ತು; ಆನೆ ದಾಳಿಗೆ ಬಲಿಯಾದವರ ಶವವನ್ನು ರಸ್ತೆಯ ಮಧ್ಯೆ ಇರಿಸಿ ಮಲೆನಾಡಿಗರು ಬೃಹತ್ ಪ್ರತಿಭಟನೆ ನಡೆಸಿದ್ದರು. ಸಚಿವರು ಬರುವವರೆಗೂ ಶವ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ನಡೆಸಿ ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಕೊಂಡೊಯ್ದ ಸರ್ಕಾರದ ಕ್ರಮ ಜನರಲ್ಲಿ ಮತ್ತಷ್ಟು ಅಸಮಾಧಾನ ಮೂಡಿಸಿತ್ತು.ª

​ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಇಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ರೈತರೊಂದಿಗೆ ಸಮಾಲೋಚನೆ ನಡೆಸಲು ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿಗೆ ಆಗಮಿಸಿದ್ದಾರೆ. ಬಾಳೆಹೊನ್ನೂರಿನ ಗುರುಭವನದಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿದ್ಧರಾಗಿರುವ ರೈತರು ಮತ್ತು ಬೆಳೆಗಾರರು, ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ಸಚಿವರಿಗೆ ಹತ್ತಾರು ಪ್ರಶ್ನೆಗಳನ್ನು ಕೇಳಲು ಮತ್ತು ಶಾಶ್ವತ ಪರಿಹಾರಕ್ಕಾಗಿ ಒತ್ತಾಯಿಸಲು ನಿರ್ಧರಿಸಿದ್ದಾರೆ.

Leave a Reply

Your email address will not be published. Required fields are marked *