ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ನಾಯಕ ಸಿ.ಟಿ. ರವಿ ಅವರ ತೇಜೋವಧೆ ಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರ ಪೋಸ್ಟ್ ಹಂಚಿಕೊಳ್ಳಲಾಗಿದೆ ಎಂದು ಆರೋಪಿಸಿ ಚಿಕ್ಕಮಗಳೂರಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸವನಹಳ್ಳಿ ನಿವಾಸಿ ಚೇತನ್ ಎಂಬುವರು ಈ ಕುರಿತು ದೂರು ನೀಡಿದ್ದು, ಜುಲೈ 25 ರಂದು ತಾವು ಇನ್ಸ್ಟಾಗ್ರಾಮ್ ಬಳಸುತ್ತಿದ್ದಾಗ ‘lyc.Karnataka’ ಎಂಬ ಖಾತೆಯಿಂದ ಪ್ರಕಟವಾದ ಪೋಸ್ಟ್ ಒಂದನ್ನು ಗಮನಿಸಿರುವುದಾಗಿ ತಿಳಿಸಿದ್ದಾರೆ. ಆ ಪೋಸ್ಟ್ನಲ್ಲಿ ಸಿ.ಟಿ. ರವಿ ಅವರ ಭಾವಚಿತ್ರವನ್ನು ದುರುದ್ದೇಶಪೂರ್ವಕವಾಗಿ ಮಾರ್ಫ್ ಮಾಡಿ, “ಒಂದು ಸಿಂಪಲ್ ಪ್ರಶ್ನೆ? OT ಕುಡಿಯೋ ಮೂದೇವಿಗೂ ನೀಟ್ ಗೂ ಏನ್ ಸಂಬಂಧ? OT ರವಿ” ಎಂದು ಆಕ್ಷೇಪಾರ್ಹ ಹಾಗೂ ಪ್ರಚೋದನಕಾರಿ ಸಾಲುಗಳನ್ನು ಬರೆಯಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ರೀತಿಯ ಪೋಸ್ಟ್ಗಳು ಸಾರ್ವಜನಿಕವಾಗಿ ಶಾಂತಿ ಕದಡುವ ಮತ್ತು ವ್ಯಕ್ತಿತ್ವಕ್ಕೆ ಧಕ್ಕೆ ತರುವ ಯತ್ನವಾಗಿದೆ ಎಂದು ತಿಳಿಸಿರುವ ದೂರುದಾರರು, ಸದರಿ ಇನ್ಸ್ಟಾಗ್ರಾಮ್ ಖಾತೆಯ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಆ ಪೋಸ್ಟ್ ಅನ್ನು ಕೂಡಲೇ ಜಾಲತಾಣದಿಂದ ತೆರವುಗೊಳಿಸಬೇಕು ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.


