ಚಿಕ್ಕಮಗಳೂರು: ಬೈಕ್ ವೇಗವಾಗಿ ಚಲಾಯಿಸಿದನೆಂಬ ಕಾರಣಕ್ಕೆ ಬಿಜೆಪಿ ಮುಖಂಡನೊಬ್ಬ ಮುಸ್ಲಿಂ ಯುವಕನ ಮೇಲೆ ಕಬ್ಬಿಣದ ರಾಡ್ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಕಾಫಿನಾಡಿನ ಅಜ್ಜಂಪುರ ಪಟ್ಟಣದಲ್ಲಿ ನಡೆದಿದೆ. ಹಲ್ಲೆಯಿಂದಾಗಿ ಯುವಕನ ಕೈ ಮೂಳೆ ಮುರಿದಿದ್ದು, ಸದ್ಯ ಅಜ್ಜಂಪುರದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಅಜ್ಜಂಪುರ ಪಟ್ಟಣದ ನಿವಾಸಿ ಮಹಮದ್ ಜೈದ್ ಹಲ್ಲೆಗೊಳಗಾದ ದುರ್ದೈವಿ ಯುವಕ. ಜೈದ್ ತನ್ನ ತಮ್ಮನನ್ನು ಶಾಲೆಯಿಂದ ಮನೆಗೆ ಕರೆತರಲು ಸ್ಕೂಟಿಯಲ್ಲಿ ಹೋಗಿದ್ದ ಎನ್ನಲಾಗಿದೆ. ಆದರೆ ಆ ಸಮಯದಲ್ಲಿ ಇನ್ನು ಶಾಲೆ ಬಿಡದ ಕಾರಣ, ಆತ ಶಾಲೆ ಬಳಿ ಎರಡು ಮೂರು ಬಾರಿ ಸ್ಕೂಟರ್ರಿನಲ್ಲಿ ಓಡಾಡಿದ್ದಾನೆ. ಈ ವೇಳೆ ಬೈಕ್ ಅನ್ನು ಜೋರಾಗಿ ಓಡಿಸುತ್ತೀಯಾ ಎಂದು ಆರೋಪಿಸಿ ಬಿಜೆಪಿ ಮುಖಂಡ ಸಂತೋಷ್ ಮಾಳೆ ಎಂಬಾತ ಜೈದ್ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ್ದಾನೆ.
ಮೈತುಂಬಾ ರಕ್ತ ಹೆಪ್ಪುಗಟ್ಟುವಂತೆ ಮಾರಣಾಂತಿಕ ಹಲ್ಲೆ:
ಆರೋಪಿ ಸಂತೋಷ್ ಮಾಳೆ ಕಬ್ಬಿಣದ ರಾಡ್ನಿಂದ ಜೈದ್ನ ಮೇಲೆ ತೀವ್ರವಾಗಿ ಪ್ರಹಾರ ಮಾಡಿದ್ದಾನೆ. ಹಲ್ಲೆಯ ತೀವ್ರತೆಗೆ ಯುವಕನ ಕೈ ಮುರಿದಿದ್ದು, ಮೈತುಂಬಾ ರಕ್ತ ಹೆಪ್ಪುಗಟ್ಟುವಂತೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಠಾಣೆ ಮುಂದೆ ನೂರಾರು ಜನರ ಜಮಾವಣೆ – ಉದ್ವಿಗ್ನ ಪರಿಸ್ಥಿತಿ:
ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ನೂರಾರು ಮುಸ್ಲಿಂ ಸಮುದಾಯದ ಯುವಕರು ಮತ್ತು ಸಾರ್ವಜನಿಕರು ಮಧ್ಯರಾತ್ರಿಯವರೆಗೂ ಅಜ್ಜಂಪುರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಆರೋಪಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಘಟನೆಯಿಂದಾಗಿ ಪಟ್ಟಣದಲ್ಲಿ ಸದ್ಯ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಬಿಗುವಿನ ವಾತಾವರಣವಿದೆ.
ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಹಾಗೂ ಪಟ್ಟಣದಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ. ಈ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಮುಖಂಡ ಸಂತೋಷ್ ಮಾಳೆ ವಿರುದ್ಧ ಪ್ರಕರಣ ದಾಖಲಾಗಿದೆ. ಇತ್ತ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಂತೆ ಆರೋಪಿ ಸಂತೋಷ್ ಮಾಳೆ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಪತ್ತೆಗಾಗಿ ಬಲೆ ಬೀಸಿದ್ದಾರೆ.















Leave a Reply