ಮೂಡಿಗೆರೆ: ವನ್ಯಜೀವಿ ಬೇಟೆಗಾರರ ಮೇಲೆ ಅರಣ್ಯ ಇಲಾಖೆ ದಾಳಿ; ಇಬ್ಬರ ಬಂಧನ,

Spread the love

 

​ಮೂಡಿಗೆರೆ: ಅಕ್ರಮವಾಗಿ ವನ್ಯಜೀವಿಗಳನ್ನು ಬೇಟೆಯಾಡಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮೂಡಿಗೆರೆ ಪ್ರಾದೇಶಿಕ ಅರಣ್ಯ ಉಪವಿಭಾಗದ ಅಧಿಕಾರಿಗಳು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ. ಬಂಧಿತರಿಂದ ಮೂರು ಪುನುಗು ಬೆಕ್ಕುಗಳ ಶವ ಹಾಗೂ ಬೇಟೆಗೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

​ 22-04-2026ರಂದು ಜನ್ನಾಪುರದಿಂದ ಮೂಡಿಗೆರೆ ಕಡೆಗೆ ಬೊಲೆರೋ ಪಿಕ್‌ಅಪ್ ವಾಹನದಲ್ಲಿ ಕಾಡುಪ್ರಾಣಿಗಳ ಮಾಂಸ ಸಾಗಾಟವಾಗುತ್ತಿದೆ ಎಂಬ ಖಚಿತ ಮಾಹಿತಿ ಅರಣ್ಯ ಇಲಾಖೆಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಗೋಣಬೀಡು ಶಾಖೆಯ ಅರಣ್ಯ ಸಿಬ್ಬಂದಿ ಹಾಲೂರು ಜೋಗಣ್ಣನಕೆರೆ ಬಸ್‌ಸ್ಟಾಂಡ್ ಬಳಿ ಹೊಂಚು ಹಾಕಿದ್ದರು.

​ಶಂಕಾಸ್ಪದವಾಗಿ ಬಂದ ಮಹೀಂದ್ರ ಬೊಲೆರೋ ಮ್ಯಾಕ್ಸ್ ಟ್ರಕ್ (KA-46-6330) ಅನ್ನು ತಪಾಸಣೆಗಾಗಿ ನಿಲ್ಲಿಸಲು ಸೂಚಿಸಿದಾಗ, ಆರೋಪಿಗಳು ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾರೆ. ತಕ್ಷಣ ಎಚ್ಚೆತ್ತ ಅಧಿಕಾರಿಗಳು ವಾಹನವನ್ನು ಬೆನ್ನಟ್ಟಿ ತಡೆಹಿಡಿದು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

​ಬಂಧಿತರು: ಎ.ಜೆ.ನಂದನ್ (38), ಅಬಚೂರು ಗ್ರಾಮ ಮತ್ತು ಹೆಚ್.ಜಿ.ಆದರ್ಶ (33), ಹಾಲೂರು ಗ್ರಾಮ.

​ವಶಪಡಿಸಿಕೊಂಡ ಸೊತ್ತು: 03 ಸತ್ತ ಪುನುಗು ಬೆಕ್ಕುಗಳು, 02 ಒಂಟಿನಳಿಕೆ ಬಂದೂಕುಗಳು, 04 ಜೀವಂತ ಗುಂಡುಗಳು, 01 ಸರ್ಚ್ ಲೈಟ್, 02 ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ ಬೊಲೆರೋ ವಾಹನ.

​ವಿಚಾರಣೆ ವೇಳೆ, ಆರೋಪಿಗಳು ಕಳಸಾಪುರ ಮತ್ತು ಮರ್ಲೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ಸರ್ಚ್ ಲೈಟ್ ಬಳಸಿ ಈ ಪ್ರಾಣಿಗಳನ್ನು ಬೇಟೆಯಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಮಾಂಸದ ಉದ್ದೇಶಕ್ಕಾಗಿ ಈ ಬೇಟೆ ನಡೆದಿರುವುದು ತಿಳಿದುಬಂದಿದೆ.

​ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೀತಮ್, ಚಿದಾನಂದ, ಕೃಷ್ಣಪ್ಪ ಹಾಗೂ ಬೇಟೆಗೆ ಬಂದೂಕು ನೀಡಿ ಸಹಕರಿಸಿದ ಹೆಚ್.ಜಿ.ಕರುಣಾಕರಮೂರ್ತಿ ಎಂಬುವವರು ತಲೆಮರೆಸಿಕೊಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಅವರಿಗಾಗಿ ಶೋಧ ಮುಂದುವರಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *