ಕಡೂರಿನಲ್ಲಿ ನಡೆದ ಚನ್ನಮ್ಮ ದೇವೇಗೌಡರ ಶ್ರದ್ಧಾಂಜಲಿ ಸಭೆಯಲ್ಲಿ ಭಾವುಕರಾದ ರೇವಣ್ಣ
ತಾಯಿ ಚನ್ನಮ್ಮ ದೇವೇಗೌಡರನ್ನು ನೆನೆದು ಮಾಜಿ ಸಚಿವ ಎಚ್.ಡಿ. ರೇವಣ್ಣ ವೇದಿಕೆಯಲ್ಲೇ ಗಳಗಳನೆ ಕಣ್ಣೀರಿಟ್ಟ ಘಟನೆ ಕಡೂರಿನಲ್ಲಿ ನಡೆದಿದೆ.
ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ನಾಗರಿಕ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ರೇವಣ್ಣ, ತಮ್ಮ ತಾಯಿ ಚನ್ನಮ್ಮ ಅವರ ಸರಳತೆ ಹಾಗೂ ಮಾನವೀಯ ಗುಣಗಳನ್ನು ಸ್ಮರಿಸಿದರು.
“ನಮ್ಮ ತಾಯಿ ಚನ್ನಮ್ಮ ಯಾರನ್ನೂ ನೋಯಿಸಿಲ್ಲ. ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದರು” ಎಂದು ಹೇಳಿದ ರೇವಣ್ಣ, ತಾಯಿಯನ್ನು ನೆನೆದು ಭಾವುಕರಾದರು.
ಕಡೂರು ಜನತೆ ತಮ್ಮ ತಂದೆ ಎಚ್.ಡಿ. ದೇವೇಗೌಡರು ಹಾಗೂ ಕುಟುಂಬಕ್ಕೆ ನೀಡಿದ ಬೆಂಬಲವನ್ನು ಸ್ಮರಿಸಿದ ಅವರು, “ಕಡೂರು ಜನರು ನಮ್ಮ ತಂದೆ ದೇವೇಗೌಡರನ್ನು, ಪ್ರಜ್ವಲ್ ರೇವಣ್ಣ ಅವರನ್ನು ಗೆಲ್ಲಿಸಿದ್ದಾರೆ. ನಮ್ಮ ಕುಟುಂಬದ ಜೀವನದಲ್ಲಿ ಕಡೂರು ಜನರನ್ನು ಎಂದಿಗೂ ಮರೆಯುವುದಿಲ್ಲ” ಎಂದು ಹೇಳಿದರು.
ಸಭೆಯಲ್ಲಿ ದೇವೇಗೌಡರ ಪುತ್ರಿ ಅನುಸೂಯ ಹಾಗೂ ಸಂಸದ ಡಾ. ಮಂಜುನಾಥ್ ಸೇರಿದಂತೆ ಗಣ್ಯರು ಭಾಗವಹಿಸಿ ಚನ್ನಮ್ಮ ದೇವೇಗೌಡರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.


