ಕಳಸ ತಾಲೂಕಿನ ಮರಸಣಿಗೆ ವ್ಯಾಪ್ತಿಯ ಗುಮ್ಮನ್ ಖಾನ್ ಬಳಿ ತೋಟದ ಪಕ್ಕದಲ್ಲಿ ಚಿರತೆ ಮರಿಗಳು ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಚಿರತೆ ಮರಿಗಳು ಕಾಣಿಸಿಕೊಂಡಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಕಳಸ ಅರಣ್ಯ ಸಿಬ್ಬಂದಿ, ಮರಿಗಳನ್ನು ತಾಯಿ ಚಿರತೆ ಜೊತೆ ಸೇರಿಸಲು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ.
ಮರಿಗಳ ಸುರಕ್ಷತೆ ಹಾಗೂ ತಾಯಿ ಚಿರತೆ ಮರಳಿ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ತೋಟದ ಸುತ್ತಮುತ್ತ ಯಾರೂ ಓಡಾಡದಂತೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ. ತೋಟದ ಕಾರ್ಮಿಕರು ಕೂಡ ಅತ್ಯಂತ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಸೂಚಿಸಲಾಗಿದೆ.
ಚಿರತೆ ಮರಿಗಳನ್ನು ತಾಯಿ ಚಿರತೆ ಜೊತೆ ಸುರಕ್ಷಿತವಾಗಿ ಒಟ್ಟುಗೂಡಿಸಲು ಅರಣ್ಯ ಇಲಾಖೆಗೆ ಸ್ಥಳೀಯರು ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ತಾಯಿ ಚಿರತೆ ಮರಿಗಳನ್ನು ಹುಡುಕಿಕೊಂಡು ಬರುವ ಸಾಧ್ಯತೆ ಇರುವುದರಿಂದ, ಸ್ಥಳೀಯರು ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ತಿಳಿಸಿದೆ .


