ಚಿಕ್ಕಮಗಳೂರು:
ರಾಜ್ಯಾದ್ಯಂತ ಆಹಾರ ಸುರಕ್ಷತಾ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸುತ್ತಿರುವ ಬೆನ್ನಲ್ಲೇ, ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುವ ಮೂರು ದಿನಗಳ ಅಂತರದಲ್ಲಿ ಎರಡು ಆಘಾತಕಾರಿ ಘಟನೆಗಳು ಬೆಳಕಿಗೆ ಬಂದಿವೆ.
ಮೊದಲ ಪ್ರಕರಣದಲ್ಲಿ ಕಳಸ ತಾಲೂಕಿನ ಹೊಟೇಲ್ ಒಂದರಲ್ಲಿ ಗ್ರಾಹಕರಿಗೆ ನೀಡಿದ ವಡೆಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಈ ಘಟನೆ ಮಾಸುವ ಮುನ್ನವೇ, ಚಿಕ್ಕಮಗಳೂರು ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ‘ಕೇಕ್ ಕಾರ್ನರ್’ (Cake Corner) ಎಂಬ ಪ್ರತಿಷ್ಠಿತ ಬೇಕರಿಯಲ್ಲಿ ಅವಧಿ ಮೀರಿದ (Expired) ಚಾಕ್ಲೇಟ್ ಸಾಸ್ ಬಳಸಿ ಕೇಕ್ ತಯಾರಿಸಿ ಮಾರಾಟ ಮಾಡುತ್ತಿರುವುದು ಧರ್ಮಸಂಕಟಕ್ಕೆ ಕಾರಣವಾಗಿದೆ.
ಅವಧಿ ಮೀರಿದ ಸಾಸ್ – ಗ್ರಾಹಕನ ಆಕ್ರೋಶ:
ಚಿಕ್ಕಮಗಳೂರಿನ ಕೇಕ್ ಕಾರ್ನರ್ ಬೇಕರಿಯಲ್ಲಿ ಖರೀದಿಸಿದ ಕೇಕ್ ಸೇವಿಸಿದಾಗ ಅದು ಕಹಿಯಾಗಿರುವುದು ಪತ್ತೆಯಾಗಿದೆ. ಅನುಮಾನಗೊಂಡ ಗ್ರಾಹಕರು ಪರಿಶೀಲಿಸಿದಾಗ, ಕೇಕ್ ತಯಾರಿಕೆಗೆ ಬಳಸಿದ ಚಾಕ್ಲೇಟ್ ಸಾಸ್ನ ಕಾಲಾವಧಿ ಮುಗಿದು ತಿಂಗಳುಗಳೇ ಕಳೆದಿರುವುದು ಬಹಿರಂಗವಾಗಿದೆ. ಕೇಕ್ ಕೊಳೆತ ವಾಸನೆ ಬರುತ್ತಿದ್ದು, ಸಾಸ್ ಸಂಪೂರ್ಣ ಕಹಿಯಾಗಿತ್ತು.
”ಮಕ್ಕಳು ಈ ಕೇಕ್ ತಿಂದಿದ್ದಾರೆ. ಒಂದು ವೇಳೆ ವಿಷಪೂರಿತ ಆಹಾರ ಸೇವಿಸಿ ಮಕ್ಕಳಿಗೆ ಏನಾದರೂ ಹೆಚ್ಚು-ಕಮ್ಮಿಯಾಗಿ ಆಸ್ಪತ್ರೆ ಸೇರಿದರೆ ಇದಕ್ಕೆ ಯಾರು ಜವಾಬ್ದಾರಿ? ಹಣಕ್ಕಾಗಿ ಜನರ ಆರೋಗ್ಯದ ಜೊತೆ ಈ ರೀತಿ ಆಟವಾಡಿದರೆ ಸಾರ್ವಜನಿಕರ ಸ್ಥಿತಿ ಏನು?” ಎಂದು ಗ್ರಾಹಕರು ಬೇಕರಿ ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ಪ್ರಶ್ನಿಸಿ ಕ್ಲಾಸ್ ತೆಗೆದುಕೊಂಡಿದ್ದಾರೆ.
”ಅವಧಿ ಮುಗಿದು ತಿಂಗಳಾಗಿದ್ದರೂ ಇಂತಹ ಕಳಪೆ ಸಾಸ್ ಹಾಕಿ ಕೇಕ್ ಮಾಡಲು ನಿಮಗೆ ಹೇಗೆ ಮನಸ್ಸು ಬಂತು? ಈ ಕಹಿ ಕೇಕ್ಗೆ ನಾವು ಹಣ ಕೊಡುವುದಿಲ್ಲ, ಈ ವಿಷಯವನ್ನು ಇಲ್ಲಿಗೆ ಬಿಡುವುದಿಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಆಹಾರ ನೈರ್ಮಲ್ಯ ಮತ್ತು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸಂಬಂಧಪಟ್ಟ ಆಹಾರ ಸುರಕ್ಷತಾ ಅಧಿಕಾರಿಗಳು ತಕ್ಷಣವೇ ಇಂತಹ ಬೇಕರಿ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


