ಚಿಕ್ಕಮಗಳೂರು ತಾಲೂಕಿನ ಬನ್ನೂರು ಸಮೀಪದ ಹಾಗಲ ಗ್ರಾಮದಲ್ಲಿ ಮೀನು ಹಿಡಿಯಲು ಹೋದ ಇಬ್ಬರು ವ್ಯಕ್ತಿಗಳು ನಾಪತ್ತೆಯಾಗಿದ್ದು, ಇಡೀ ಗ್ರಾಮದಲ್ಲಿ ಆತಂಕದ ಛಾಯೆ ಆವರಿಸಿದೆ. ರಮೇಶ್ (27) ಹಾಗೂ ಮಹೇಶ್ (36) ನಾಪತ್ತೆಯಾದ ದುರ್ದೈವಿಗಳು. ಶನಿವಾರ ಸಂಜೆ ಕೆರೆಗೆ ತೆರಳಿದ್ದ ಇವರು ತಡರಾತ್ರಿಯಾದರೂ ಮನೆಗೆ ಹಿಂತಿರುಗದೆ ಇದ್ದಾಗ ಕುಟುಂಬಸ್ಥರು ಆತಂಕಗೊಂಡು ಹುಡುಕಾಟ ನಡೆಸಿದ್ದಾರೆ. ಕೆರೆಯ ಸಮೀಪ ಶೋಧ ನಡೆಸಿದಾಗ ಅವರು ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದ್ದು, ಕೆರೆಯಲ್ಲಿ ಮುಳುಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು, ಕೆರೆಯ ನೀರಿನಲ್ಲಿ ನಾಪತ್ತೆಯಾದವರಿಗಾಗಿ ತೀವ್ರ ಶೋಧ ಕಾರ್ಯ ಕೈಗೊಂಡಿದ್ದಾರೆ. ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಹಿತಕರ ಘಟನೆ ಸಂಭವಿಸಿದ್ದು, ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಕೆರೆಗೆ ಮೀನು ಹಿಡಿಯಲು ಹೋದವರು ಶವವಾಗಿ ಸಿಗುತ್ತಾರಾ ಅಥವಾ ಏನಾಗಿದೆ ಎಂಬ ಕುತೂಹಲ ಮತ್ತು ಆತಂಕ ಸ್ಥಳೀಯರಲ್ಲಿ ಮನೆ ಮಾಡಿದ್ದು, ಮುಳುಗು ತಜ್ಞರ ನೆರವಿನಿಂದ ಕಾರ್ಯಾಚರಣೆ ಮುಂದುವರಿದಿದೆ.













Leave a Reply