ಚಿಕ್ಕಮಗಳೂರು ಜಿಲ್ಲೆಯ ಯುವ ಪ್ರತಿಭೆಯೊಬ್ಬರು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಿದ್ದು, ಚೀನಾದ ಬೀಜಿಂಗ್ನಲ್ಲಿ ನಡೆಯಲಿರುವ ಪ್ರತಿಷ್ಠಿತ ‘BRICS+’ ವಿಜ್ಞಾನ ಮತ್ತು ತಂತ್ರಜ್ಞಾನ ತರಬೇತಿ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ. ತಾಲೂಕಿನ ಯಲಗುಡಿಗೆ ಗ್ರಾಮದ ಶ್ರೀಮತಿ ವನಮಾಲ ಮತ್ತು ಶ್ರೀ ಮೃತ್ಯುಂಜಯ ದಂಪತಿಯ ಹಿರಿಯ ಪುತ್ರ ಬಿ.ಎಂ. ಅವಿನಾಶ್ ಈ ಅಪರೂಪದ ಗೌರವಕ್ಕೆ ಪಾತ್ರರಾದ ಯುವಕ. ಪ್ರಸ್ತುತ ದುಬೈನಲ್ಲಿ ಉದ್ಯೋಗಿಯಾಗಿರುವ ಇವರು, ಜಾಗತಿಕ ವೇದಿಕೆಯಲ್ಲಿ ಕಾಫಿನಾಡಿನ ಹೆಸರನ್ನು ಉನ್ನತ ಮಟ್ಟಕ್ಕೇರಿಸಿದ್ದಾರೆ.
ಬೀಜಿಂಗ್ನಲ್ಲಿ ಜೂನ್ 3ರಿಂದ ಜೂನ್ 17ರವರೆಗೆ “STI ಪಾರ್ಕ್ ಆಡಳಿತ ಮತ್ತು ಕ್ರಾಸ್-ಬಾರ್ಡರ್ ಇನ್ನೋವೇಶನ್ ಸಹಕಾರ” ಎಂಬ ವಿಶೇಷ ವಿಷಯದ ಅಡಿಯಲ್ಲಿ ಈ ಉನ್ನತ ಮಟ್ಟದ ತರಬೇತಿ ಕಾರ್ಯಕ್ರಮ ಆಯೋಜನೆಗೊಂಡಿದೆ. BRICS ಮತ್ತು “BRICS+” ರಾಷ್ಟ್ರಗಳಲ್ಲಿ ವಿಜ್ಞಾನ, ತಂತ್ರಜ್ಞಾನ ನೀತಿಗಳು ಹಾಗೂ ನಾವೀನ್ಯತೆ ಪರಿಸರ ವ್ಯವಸ್ಥೆಗಳ ಅಭಿವೃದ್ಧಿಗೆ ಪೂರಕವಾಗಿ ಈ ವೇದಿಕೆ ಕಾರ್ಯನಿರ್ವಹಿಸಲಿದೆ. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಂತರರಾಷ್ಟ್ರೀಯ ಸಹಕಾರ ಇಲಾಖೆಯ ಬೆಂಬಲದೊಂದಿಗೆ, ಬೀಜಿಂಗ್ ಅಂತರಾಷ್ಟ್ರೀಯ ವಿನಿಮಯ ಸಂಘವು ಈ ಜಾಗತಿಕ ಕಾರ್ಯಕ್ರಮವನ್ನು ಆಯೋಜಿಸಿದೆ.
ನೀತಿ ವಿನ್ಯಾಸ, ಪಾರ್ಕ್ ಆಡಳಿತ ಮತ್ತು ಗಡಿಯಾಚೆಗಿನ ತಂತ್ರಜ್ಞಾನ ಸಹಯೋಗವನ್ನು ಬಲಪಡಿಸುವ ಪ್ರಮುಖ ಉದ್ದೇಶವನ್ನು ಈ ತರಬೇತಿ ಹೊಂದಿದೆ. ಇಂತಹ ಪ್ರಭಾವಿ ಮತ್ತು ಅಂತರರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಚಿಕ್ಕಮಗಳೂರಿನ ಯಲಗುಡಿಗೆಯ ಯುವಕ ಭಾಗವಹಿಸುತ್ತಿರುವುದು ಇಡೀ ಜಿಲ್ಲೆಗೆ ಹಾಗೂ ಅವರ ಹೆತ್ತವರಿಗೆ ಅಪಾರ ಹೆಮ್ಮೆಯ ಸಂಗತಿಯಾಗಿದೆ.













Leave a Reply