ಚಿಕ್ಕಮಗಳೂರು: ಹೈಕೋರ್ಟ್ ನಿರ್ದೇಶನದಂತೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಶನಿವಾರ ತಡರಾತ್ರಿ ಪೂರ್ಣಗೊಂಡಿದೆ. ಈ ಕುರಿತು ಚುನಾವಣಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಅವರು ಅಧಿಕೃತ ಹೇಳಿಕೆ ನೀಡಿದ್ದು, ಮರು ಎಣಿಕೆಯ ವರದಿಯನ್ನು ಹೈಕೋರ್ಟ್ ಮತ್ತು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
- ಒಟ್ಟು ಅಂಚೆ ಮತಗಳು: 1822
- 2023ರ ಫಲಿತಾಂಶ: ಬಿಜೆಪಿ ಅಭ್ಯರ್ಥಿ ಜೀವರಾಜ್ ಅವರಿಗೆ 692 ಮತ ಹಾಗೂ ಕಾಂಗ್ರೆಸ್ನ ರಾಜೇಗೌಡ ಅವರಿಗೆ 569 ಮತಗಳು ಲಭಿಸಿದ್ದವು.
- 2026ರ ಮರು ಎಣಿಕೆ: ಜೀವರಾಜ್ ಅವರ ಮತಗಳಲ್ಲಿ 2 ಮತಗಳ ಇಳಿಕೆಯಾಗಿದ್ದು, 690 ಮತಗಳನ್ನು ಪಡೆದಿದ್ದಾರೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಅವರ ಮತಗಳಲ್ಲಿ ಭಾರಿ ಕುಸಿತ ಕಂಡುಬಂದಿದ್ದು, ಕೇವಲ 314 ಮತಗಳನ್ನು ಮಾತ್ರ ಪಡೆದಿದ್ದಾರೆ.
ಮರು ಎಣಿಕೆಯ ಸಂದರ್ಭದಲ್ಲಿ ರಾಜೇಗೌಡರಿಗೆ ಬಿದ್ದಿದ್ದ 251 ಮತಗಳನ್ನು ಅಸಿಂಧು ಎಂದು ಘೋಷಿಸಲಾಗಿದೆ. ಈ ಹಿಂದೆ ಸಿಂಧು ಎಂದು ಪರಿಗಣಿಸಲಾಗಿದ್ದ ಮತಗಳನ್ನು ಈಗ ಆಯೋಗದ ಕಟ್ಟುನಿಟ್ಟಿನ ನಿರ್ದೇಶನದಂತೆ ಮರು ಪರಿಶೀಲಿಸಿದಾಗ ಅವು ತಾಂತ್ರಿಕ ಕಾರಣಗಳಿಂದ ಅಸಿಂಧುಗೊಂಡಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
”ಹೈಕೋರ್ಟ್ ಸೂಚನೆಯಂತೆ 1822 ಅಂಚೆ ಮತಗಳ ಮರು ಎಣಿಕೆ ಮಾಡಲಾಗಿದೆ. ಆಯೋಗದ ಮಾರ್ಗಸೂಚಿಯಂತೆ ಈ ಕಾರ್ಯ ನಡೆದಿದೆ. ಮತ ಟ್ಯಾಂಪರಿಂಗ್ ಬಗ್ಗೆ ಪ್ರತಿಕ್ರಿಯಿಸಲು ನಮಗೆ ಅಧಿಕಾರವಿಲ್ಲ, ನಾವು ಕೇವಲ ಎಣಿಕೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ.”
— ಗೌರವ್ ಕುಮಾರ್ ಶೆಟ್ಟಿ, ಚುನಾವಣಾಧಿಕಾರಿ

2023ರ ಚುನಾವಣೆಯಲ್ಲಿ ರಾಜೇಗೌಡ ಅವರು ಅತ್ಯಲ್ಪ ಮತಗಳ ಅಂತರದಿಂದ ಜಯಗಳಿಸಿದ್ದರು. ಇದನ್ನು ಪ್ರಶ್ನಿಸಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈಗಿನ ಮರು ಎಣಿಕೆಯ ಫಲಿತಾಂಶವು ಕ್ಷೇತ್ರದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಹೈಕೋರ್ಟ್ ನೀಡುವ ಮುಂದಿನ ತೀರ್ಪಿನ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.











Leave a Reply