ಚಿಕ್ಕಮಗಳೂರು: ಕಾಫಿ ನಾಡು ಮತ್ತು ಮಲೆನಾಡು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬಿಸಿಲ ಬೇಗೆಗೆ ಕಂಗಾಲಾಗಿದ್ದ ಜನರಿಗೆ ಹಾಗೂ ಬೆಳೆಗಾರರಿಗೆ ವರುಣದೇವ ತಂಪು ಎರೆದಿದ್ದಾನೆ. ವಿಶೇಷವೆಂದರೆ, ಮಳೆಗಾಗಿ ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜೆ ಮುಗಿಯುವ ಮೊದಲೇ ಮಲೆನಾಡಿನಾದ್ಯಂತ ಮಳೆ ಅಬ್ಬರಿಸಿದ್ದು, ಭಕ್ತರಲ್ಲಿ ಮತ್ತು ರೈತರಲ್ಲಿ ಸಂಭ್ರಮ ಮೂಡಿಸಿದೆ.
ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾದ ಕಳಸದ ಶ್ರೀ ಕಳಸೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಇಂದು ನಾಡಿನ ಸುವೃಷ್ಟಿಗಾಗಿ (ಉತ್ತಮ ಮಳೆಗಾಗಿ) ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶತಾರುದ್ರಾಭಿಷೇಕ, ಏಕಾದಶ ರುದ್ರಹೋಮ ಹಾಗೂ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಭಕ್ತರು ‘ಕಳಸದ ಕಳಸೇಶ್ವರನಿಗೆ ಉಘೇ’ ಎನ್ನುತ್ತಾ ಮಳೆಗಾಗಿ ಮೊರೆ ಹೋಗಿದ್ದರು.
ದೇವಸ್ಥಾನದಲ್ಲಿ ಧಾರ್ಮಿಕ ವಿಧಿವಿಧಾನಗಳು ಮುಗಿಯುವ ಹಂತಕ್ಕೆ ಬರುತ್ತಿದ್ದಂತೆಯೇ, ಮಲೆನಾಡಿನ ಆಕಾಶದಲ್ಲಿ ಮೋಡಗಳು ಕವಿದು ಧಾರಾಕಾರ ಮಳೆ ಸುರಿಯಲಾರಂಭಿಸಿತು.


