ಚಿಕ್ಕಮಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ನೋಂದಣಿ ಹಾಗೂ ಲೆಕ್ಕ ಕೇಳಿರುವ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಪ್ರಿಯಾಂಕ್ ಖರ್ಗೆ ಅವರೇ, ನೀವು ಆರ್ಎಸ್ಎಸ್ಗೆ ಏನೂ ಮಾಡಲು ಸಾಧ್ಯವಿಲ್ಲ. ಆನೆ ಮುಂದೆ ನಿಂತು ಹೀಗೆ ಮಾಡು, ಹಾಗೆ ಮಾಡು ಎನ್ನಲು ನೀವ್ಯಾರು?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
‘ನೀವು ಆಲ್ ಇಂಡಿಯಾ ಸಂಘಟನೆಗೆ ಕೇಳಲು ನೀವ್ಯಾರು?’
”ಖರ್ಗೆ ಅವರೇ, ‘Who are you…?’ ನೀವು ಕರ್ನಾಟಕಕ್ಕೆ ಮಾತ್ರ ಸಚಿವರು. ಇಡೀ ದೇಶಾದ್ಯಂತ ಇರುವ ಸಂಘಟನೆಯನ್ನು ಪ್ರಶ್ನಿಸಲು ನಿಮಗೇನು ಅಧಿಕಾರ ಇದೆ? ಅಧಿಕಾರ ಸಿಕ್ಕ ಕೆಲವೇ ದಿನಗಳಲ್ಲಿ ಆರ್ಎಸ್ಎಸ್ ರಿಜಿಸ್ಟರ್, ಲೆಕ್ಕ ಅಂತ ಅಪಪ್ರಚಾರ ಮಾಡಲು ಶುರು ಮಾಡಿದ್ದೀರಿ. ನೀವು ಕೇವಲ 7 ಕೋಟಿ ಜನರ ಪ್ರತಿನಿಧಿ, ಆದರೆ ಆರ್ಎಸ್ಎಸ್ 140 ಕೋಟಿ ಜನರ ಒಳಿತಿಗಾಗಿ ಕೆಲಸ ಮಾಡುತ್ತಿದೆ. ಆರ್ಎಸ್ಎಸ್ ಎಲ್ಲಿದೆ, ನೀವೆಲ್ಲಿದ್ದೀರಿ?” ಎಂದು ಮುತಾಲಿಕ್ ಜರಡಿದರು.
140 ದೇಶಗಳಲ್ಲಿ ಆರ್ಎಸ್ಎಸ್ ಸಮಾಜಮುಖಿ ಕೆಲಸ
ಕಳೆದ 100 ವರ್ಷಗಳಿಂದ ಬೆಳೆದು ಬಂದಿರುವ ಆರ್ಎಸ್ಎಸ್ ಒಂದು ಅಂತಾರಾಷ್ಟ್ರೀಯ ಸಂಘಟನೆಯಾಗಿದೆ. ವಿಶ್ವದ 140 ದೇಶಗಳಲ್ಲಿ ಇದು ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಸಾವಿರಾರು ಅನಾಥಾಶ್ರಮಗಳು, ಶಾಲೆಗಳು ಹಾಗೂ ಗೋಶಾಲೆಗಳ ಮೂಲಕ ನಿರಂತರವಾಗಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದೆ. ಆರ್ಎಸ್ಎಸ್ ನೋಂದಣಿ ಆಗಿಲ್ಲ, ಮಾಡುವುದೂ ಇಲ್ಲ; ಇದರಿಂದ ನಿಮಗೇನು ತೊಂದರೆ? ಎಂದು ಮುತಾಲಿಕ್ ಪ್ರಶ್ನಿಸಿದರು.
‘ದೇಶದ್ರೋಹದ ಒಂದೇ ಒಂದು ಉದಾಹರಣೆ ಇದೆಯಾ?’
ಆರ್ಎಸ್ಎಸ್ ಎಂದಿಗೂ ಕಾನೂನು ಬಾಹಿರ ಚಟುವಟಿಕೆ ಅಥವಾ ದೇಶದ್ರೋಹದ ಕೆಲಸ ಮಾಡಿಲ್ಲ. ಅದಕ್ಕೆ ಒಂದೇ ಒಂದು ಉದಾಹರಣೆಯೂ ಇಲ್ಲ. ಶುದ್ಧ, ಶಾಂತ ಹಾಗೂ ಶಿಸ್ತುಬದ್ಧವಾದ ಸ್ವದೇಶಿ ಚಳುವಳಿಯ ಮೂಲಕ ದೇಶಭಕ್ತಿಯನ್ನು ನಿರ್ಮಿಸುತ್ತಿರುವ ಸಂಘಟನೆಯ ವಿರುದ್ಧ ನಿಮ್ಮ ಟೀಕೆ ಹಾಗೂ ಬೇಡಿಕೆಗಳು ಅತ್ಯಂತ ಅಸಹ್ಯವಾದವು ಎಂದು ಆಕ್ರೋಶ ವ್ಯಕ್ತಪಡಿಸಿದರು.















Leave a Reply