ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಸ್ಸಾಂ ರ್ಯಾಲಿಯಲ್ಲಿ ಆರ್ಎಸ್ಎಸ್ ಮತ್ತು ಬಿಜೆಪಿ ವಿರುದ್ಧ ನೀಡಿರುವ ಹೇಳಿಕೆಯನ್ನು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ತೀವ್ರವಾಗಿ ಖಂಡಿಸಿದ್ದಾರೆ. ಖರ್ಗೆ ಅವರ ಈ ಮಾತುಗಳನ್ನು ಗಮನಿಸಿದರೆ ಅವರಿಗೆ ಅಸ್ಸಾಂನಲ್ಲಿ ಸೋಲಿನ ಭೀತಿ ಎದುರಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ರಾಜಕೀಯವು ಅಭಿವೃದ್ಧಿಯ ಮೇಲೆ ನಡೆಯಬೇಕೇ ಹೊರತು ರಕ್ತಪಾತದ ಮೇಲಲ್ಲ ಎಂದು ಪ್ರತಿಪಾದಿಸಿದ ಸಂತೋಷ್ ಕೋಟ್ಯಾನ್, ಖರ್ಗೆ ಅವರ ಹೇಳಿಕೆಯನ್ನು 21ನೇ ಶತಮಾನದ ‘ಮೊಹಮ್ಮದ್ ಅಲಿ ಜಿನ್ನಾ’ ಅವರ ರೂಪದಂತೆ ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಿಂದೆ ಜಿನ್ನಾ ಅವರು ಹಿಂದೂ-ಮುಸ್ಲಿಮರ ನಡುವೆ ದ್ವೇಷ ಬಿತ್ತಿದ್ದಂತೆಯೇ, ಇಂದು ಖರ್ಗೆ ಅವರು ಮುಸ್ಲಿಮರಿಗೆ ಆರ್ಎಸ್ಎಸ್ ಮತ್ತು ಬಿಜೆಪಿ ಮೇಲೆ ದ್ವೇಷ ಬರುವಂತೆ ಪ್ರಚೋದನಕಾರಿ ಭಾಷಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಮಾಜು ಮಾಡುವ ಸಂದರ್ಭದಲ್ಲಿ ನಾಗರಹಾವು ಬಂದರೆ ಅದನ್ನು ಸಾಯಿಸುವಂತೆ, ಬಿಜೆಪಿ ಮತ್ತು ಆರ್ಎಸ್ಎಸ್ ಕಾರ್ಯಕರ್ತರನ್ನು ಸಾಯಿಸಬೇಕು ಎಂಬ ಖರ್ಗೆ ಅವರ ಹೇಳಿಕೆಯು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗೆ ಶೋಭಿಸುವುದಿಲ್ಲ. ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಮರೆತು ಅವರು ಇಂತಹ ಕೀಳುಮಟ್ಟದ ಭಾಷಣ ಮಾಡಿರುವುದು ಖಂಡನೀಯ ಎಂದು ಸಂತೋಷ್ ಕೋಟ್ಯಾನ್ ಹೇಳಿದ್ರು


