ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ (AITUC) ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮಾರ್ಚ್ 2ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಅಜ್ಮತ್ ತಿಳಿಸಿದ್ರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ 15,000 ರೂ. ಹಾಗೂ ಸಹಾಯಕಿಯರಿಗೆ 10,000 ರೂ. ಗೌರವ ಧನ ಹೆಚ್ಚಿಸಬೇಕು ಮತ್ತು 2011ರಿಂದ ನಿವೃತ್ತರಾದವರಿಗೆ ಗ್ರಾಚ್ಯುಟಿ ಸೌಲಭ್ಯ ನೀಡಬೇಕು ಎಂಬುದು ಸಂಘಟನೆಯ ಪ್ರಮುಖ ಒತ್ತಾಯವಾಗಿದೆ ಎಂದು ತಿಳಿಸಿದ್ರು. ಅಂಗನವಾಡಿ ಕೆಲಸದ ಜೊತೆಗೆ ಹೆಚ್ಚುವರಿಯಾಗಿ ಹೇರಲಾಗುತ್ತಿರುವ ಬಿ.ಎಲ್.ಒ ಜವಾಬ್ದಾರಿಯನ್ನು ಕೈಬಿಡಬೇಕು ಮತ್ತು ನಿವೃತ್ತಿ ವಯಸ್ಸನ್ನು ಇತರ ರಾಜ್ಯಗಳ ಮಾದರಿಯಲ್ಲಿ 65 ವರ್ಷಕ್ಕೆ ಏರಿಸಬೇಕು ಎಂದು ಫೆಡರೇಷನ್ ಆಗ್ರಹಿಸಿದೆ.
ಇದರೊಂದಿಗೆ ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳನ್ನು ಪ್ರಾರಂಭಿಸುವುದರಿಂದ ಅಂಗನವಾಡಿಗಳ ಮೇಲೆ ಆಗುತ್ತಿರುವ ಪರಿಣಾಮವನ್ನು ತಡೆಗಟ್ಟಿ, ಅಂಗನವಾಡಿ ಕೇಂದ್ರಗಳಲ್ಲೇ ಈ ಶಿಕ್ಷಣ ವ್ಯವಸ್ಥೆ ಬಲಪಡಿಸಬೇಕು ಎಂಬುದು ಸಂಘಟನೆಯ ನಿಲುವಾಗಿದೆ. ಮಕ್ಕಳ ಪೌಷ್ಟಿಕ ಆಹಾರದ ವೆಚ್ಚ ಹೆಚ್ಚಳ, ಬಾಡಿಗೆ ಪಾವತಿ, ಅನಾರೋಗ್ಯದ ಸಂದರ್ಭದಲ್ಲಿ ವೇತನ ಸಹಿತ ರಜೆ ಮತ್ತು ಖಾಲಿ ಇರುವ ಹುದ್ದೆಗಳ ಭರ್ತಿ ಸೇರಿದಂತೆ ಒಟ್ಟು 16 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ‘ಬೆಂಗಳೂರು ಚಲೋ’ ಚಳವಳಿ ನಡೆಸಲು ನಿರ್ಧರಿಸಲಾಗಿದೆ.















Leave a Reply