ಹೋಂ ಸ್ಟೇ ಮಾಲೀಕನ ನಿರ್ಲಕ್ಷ್ಯಕ್ಕೆ ಬಲಿಯಾದ ಐಟಿ ಉದ್ಯೋಗಿ: ನಾಲ್ಕು ತಿಂಗಳ ಬಳಿಕ ಎಫ್.ಐ.ಆರ್ ದಾಖಲು

Spread the love

ಚಿಕ್ಕಮಗಳೂರು: ತಾಲೂಕಿನ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯ ಹಾಂದಿ ಮಾಚಗೊಂಡನಹಳ್ಳಿಯ ‘ಹಿಪ್ಲಾ ಹೋಂ ಸ್ಟೇ’ನಲ್ಲಿ ನಡೆದಿದ್ದ ಯುವತಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಲೀಕ ಸುಧಾಕರ್ ಎಂಬುವವರ ವಿರುದ್ಧ ಇದೀಗ ಅಧಿಕೃತವಾಗಿ ಎಫ್.ಐ.ಆರ್ ದಾಖಲಾಗಿದೆ. ಕಳೆದ ಅಕ್ಟೋಬರ್ 25ರಂದು ಬೆಂಗಳೂರಿನ ಐಟಿ ಉದ್ಯೋಗಿ ರಂಜಿತಾ ಡಿ. ಅವರು ತಮ್ಮ ಸ್ನೇಹಿತೆ ರೇಖಾ ಅವರೊಂದಿಗೆ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮಕ್ಕಾಗಿ ಈ ಹೋಂ ಸ್ಟೇಗೆ ಆಗಮಿಸಿದ್ದರು. ಸ್ನಾನಕ್ಕೆಂದು ತೆರಳಿದ್ದ ರಂಜಿತಾ ಅವರು ಬಹಳ ಹೊತ್ತಾದರೂ ಹೊರಬರದಿದ್ದಾಗ, ಕಿಟಕಿಯಿಂದ ನೋಡಿದಾಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು.

ಈ ಸಾವಿನ ಬಗ್ಗೆ ಸಹೋದರ ರತನ್ ಅವರು ನೀಡಿದ ದೂರಿನನ್ವಯ ಆರಂಭದಲ್ಲಿ ಅಸಹಜ ಸಾವು (UDR) ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆದರೆ, ಇತ್ತೀಚೆಗೆ ಲಭ್ಯವಾದ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ರಂಜಿತಾ ಅವರು ಕಾರ್ಬನ್ ಮಾನಾಕ್ಸೈಡ್ ಅನಿಲ ಸೇವನೆಯಿಂದಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಹೋಂ ಸ್ಟೇ ಮಾಲೀಕರು ಸ್ನಾನದ ಕೋಣೆಯಲ್ಲಿ ಗ್ಯಾಸ್ ಗೀಸರ್ ಅಳವಡಿಸುವಾಗ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಹಾಗೂ ಅಲ್ಲಿ ಸರಿಯಾದ ಗಾಳಿ-ಬೆಳಕಿನ (ವೆಂಟಿಲೇಶನ್) ವ್ಯವಸ್ಥೆ ಇರಲಿಲ್ಲ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ.

Leave a Reply

Your email address will not be published. Required fields are marked *