ಚಿಕ್ಕಮಗಳೂರು: ಕಾಫಿನಾಡಿನ ಮಾಣಿಕ್ಯಧಾರಾ ಬಳಿ ಪ್ರವಾಸಕ್ಕೆ ಬಂದಿದ್ದ ಕೇರಳ ಮೂಲದ ಬಾಲಕಿ ನಾಪತ್ತೆಯಾಗಿ ಮೂರು ದಿನಗಳೇ ಕಳೆದಿದ್ದರೂ, ಇನ್ನು ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ವತಃ ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಪಶ್ಚಿಮ ವಲಯ ಐಜಿ ಅಮಿತ್ ಸಿಂಗ್, ಕಾರ್ಯಾಚರಣೆಯ ವಿಳಂಬಕ್ಕೆ ಅಧೀನ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಚಿಕ್ಕಮಗಳೂರಿಗೆ ಆಗಮಿಸಿರುವ ಐಜಿ ಅಮಿತ್ ಸಿಂಗ್, ಇಂದು ಮಾಣಿಕ್ಯಧಾರಾ ಅರಣ್ಯ ಪ್ರದೇಶ ಮತ್ತು ಬಾಲಕಿ ನಾಪತ್ತೆಯಾದ ಸ್ಥಳಗಳಿಗೆ ಭೇಟಿ ನೀಡಿದರು. ಕಳೆದ 72 ಗಂಟೆಗಳಿಂದ ನೂರಾರು ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದರೂ ಒಂದೇ ಒಂದು ಸಣ್ಣ ಸುಳಿವು ಕೂಡ ಸಿಗದಿರುವುದು ಅವರ ಕೆಂಗಣ್ಣಿಗೆ ಗುರಿಯಾಗಿದೆ.
ತನಿಖೆಯ ಪ್ರಗತಿಯನ್ನು ಪರಿಶೀಲಿಸಿದ ಐಜಿ, ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ಮೇಲೆ ಕೆಂಡಾಮಂಡಲರಾದರು. “ಬಾಲಕಿ ಕಣ್ಮರೆಯಾಗಿ ಮೂರು ದಿನಗಳಾದರೂ ಯಾವುದೇ ಪ್ರಗತಿ ಇಲ್ಲ ಎಂದರೆ ಏನರ್ಥ?” ಎಂದು ಪ್ರಶ್ನಿಸಿದ ಅವರು, ಕರ್ತವ್ಯ ಲೋಪದ ಬಗ್ಗೆ ಅಸಮಾಧಾನ ಹೊರಹಾಕಿದರು ಎನ್ನಲಾಗಿದೆ.
”ಇಷ್ಟು ದೊಡ್ಡ ಪಡೆ ಇದ್ದೂ ಒಂದು ಮಗುವಿನ ಸುಳಿವು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲವೆಂದರೆ ನಿಮ್ಮ ತನಿಖಾ ವೈಖರಿ ಎತ್ತ ಸಾಗುತ್ತಿದೆ?” ಎಂದು ಐಜಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸ್ಥಳದಲ್ಲಿ ಡ್ರೋನ್ ಕ್ಯಾಮೆರಾಗಳು, ಶ್ವಾನದಳ ಹಾಗೂ ನೂರಾರು ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ ಶೋಧ ಮುಂದುವರಿಸಿದ್ದಾರೆ. ಐಜಿ ಅವರ ಕಟ್ಟುನಿಟ್ಟಿನ ಸೂಚನೆಯ ನಂತರ, ತಪಾಸಣಾ ತಂಡಗಳನ್ನು ವಿಸ್ತರಿಸಲಾಗಿದ್ದು, ಅಕ್ಕಪಕ್ಕದ ಕಂದಕಗಳು ಮತ್ತು ದಟ್ಟ ಅರಣ್ಯ ಪ್ರದೇಶದಲ್ಲಿ ಹದ್ದಿನ ಕಣ್ಣಿಡಲಾಗಿದೆ.
















Leave a Reply