ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಎತ್ತಿನಭುಜದಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಚಾರಣ (ಟ್ರೆಕ್ಕಿಂಗ್) ಆರಂಭಿಸಿರುವುದು ಪ್ರವಾಸಿಗರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ ಹಲವು ತಿಂಗಳುಗಳಿಂದ ಮುಚ್ಚಲ್ಪಟ್ಟಿದ್ದ ಎತ್ತಿನಭುಜ ಚಾರಣವನ್ನು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳಿಲ್ಲದೆ ದಿಢೀರ್ ತೆರೆದಿರುವುದು ಪ್ರವಾಸಿಗರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಆನ್ಲೈನ್ ಮೂಲಕ ಬುಕಿಂಗ್ ಮಾಡಿಕೊಂಡು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಚಾರಣಿಗರು ಸೂಕ್ತ ಗೈಡ್ಗಳಿಲ್ಲದೆ ದಟ್ಟ ಕಾಡಿನಲ್ಲಿ ಮಾರ್ಗ ತಿಳಿಯದೆ ಪರದಾಡುವಂತಾಗಿದೆ. ಯಾವುದೇ ನಿಯಮಾವಳಿ (SOP) ಪಾಲಿಸದೆ ಹಾಗೂ ಮಾರ್ಗದರ್ಶಿಗಳನ್ನು ನೇಮಿಸದೆ ಅರಣ್ಯ ಇಲಾಖೆ ಚಾರಣಕ್ಕೆ ಅವಕಾಶ ನೀಡಿದೆ ಎಂದು ಪ್ರವಾಸಿಗರು ಆರೋಪಿಸಿದ್ದಾರೆ.
ಸೌಕರ್ಯವಿಲ್ಲದೆ ದರ ವಸೂಲಿ: ಅರಣ್ಯ ಇಲಾಖೆಯು 5 ಕಿ.ಮೀ. ಚಾರಣಕ್ಕೆ ಒಬ್ಬರಿಗೆ ₹300 ದರ ನಿಗದಿಪಡಿಸಿದ್ದು, ಗೈಡ್ ಶುಲ್ಕವಾಗಿ ಪ್ರತ್ಯೇಕವಾಗಿ ₹75 ವಸೂಲಿ ಮಾಡುತ್ತಿದೆ. ಆದರೆ ಪ್ರತ್ಯಕ್ಷವಾಗಿ ಯಾವುದೇ ಗೈಡ್ಗಳ ಸೇವೆ ಲಭ್ಯವಿಲ್ಲ.
ಚಾರಣದ ಹಾದಿಯಲ್ಲಿ ಬಿದ್ದಿರುವ ಬೃಹತ್ ಮರಗಳನ್ನು ತೆರವುಗೊಳಿಸದೆ ರಸ್ತೆ ಬ್ಲಾಕ್ ಆಗಿದ್ದರೂ ಅರಣ್ಯ ಇಲಾಖೆ ಯಾವುದೇ ಕಾಳಜಿ ವಹಿಸಿಲ್ಲ.
ದಾರಿತಪ್ಪಿ ವಾಪಸ್: ಕಾಡಿನ ಮಾರ್ಗ ತಿಳಿಯದೆ, ದಾರಿ ತಪ್ಪುವ ಭೀತಿಯಿಂದ ಹಲವು ಪ್ರವಾಸಿಗರು ಅರ್ಧದಲ್ಲೇ ಚಾರಣವನ್ನು ಕೈಬಿಟ್ಟು ವಾಪಸ್ ತೆರಳಿದ್ದಾರೆ.
ಪ್ರವಾಸಿಗರಿಂದ ನಿಗದಿತ ಶುಲ್ಕ ವಸೂಲಿ ಮಾಡುವ ಕಾಫಿನಾಡಿನ ಅರಣ್ಯ ಇಲಾಖೆ, ಕನಿಷ್ಠ ಭದ್ರತೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸದಿರುವುದು ಸಾರ್ವಜನಿಕರ ಹಾಗೂ ಪ್ರವಾಸಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಇಲಾಖೆಯು ಈ ಬಗ್ಗೆ ಗಮನಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ .


