ಮಲೆನಾಡಲ್ಲಿ ಭಾರೀ ಗಾಳಿ-ಮಳೆ ಅಬ್ಬರ ಚಿಕ್ಕಮಗಳೂರು-ಬಾಳೆಹೊನ್ನೂರು ಮಾರ್ಗ ಸಂಪೂರ್ಣ ಬಂದ್

Spread the love

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಅಕಾಲಿಕ ಮಳೆ ಅಬ್ಬರಿಸಿದೆ. ಬೇಸಿಗೆ ಕಾಲದಲ್ಲೇ ಸುರಿದ ಭಾರೀ ಗಾಳಿ-ಮಳೆಯಿಂದ ದೊಡ್ಡ ಮಟ್ಟದ ಅನಾಹುತ ಸಂಭವಿಸಿದೆ.

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಗ್ರಾಮದ ಬಳಿ ಬಿರುಗಾಳಿಗೆ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ಒಂದರ ಹಿಂದೆ ಒಂದರಂತೆ ರಾಜ್ಯ ಹೆದ್ದಾರಿಯಲ್ಲೇ ವಿದ್ಯುತ್ ಕಂಬಗಳು ಕುಸಿದು ಬಿದ್ದ ಪರಿಣಾಮ, ಚಿಕ್ಕಮಗಳೂರಿನಿಂದ ಬಾಳೆಹೊನ್ನೂರಿಗೆ ಸಾಗುವ ಮುಖ್ಯ ವಿದ್ಯುತ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ.

ಆಲ್ದೂರು ಭಾಗದಲ್ಲಿ ಕಂಬಗಳು ಮುರಿದ ಕಾರಣ, ಮಲೆನಾಡಿನ ಹಲವೆಡೆ ಕತ್ತಲೆ ಆವರಿಸಿದೆ. ಚಿಕ್ಕಮಗಳೂರು–ಬಾಳೆಹೊನ್ನೂರು ಮಾರ್ಗದಲ್ಲಿರುವ ಹತ್ತಾರು ಹಳ್ಳಿಗಳು ವಿದ್ಯುತ್ ಇಲ್ಲದೆ ಸಂಕಷ್ಟ ಅನುಭವಿಸುತ್ತಿವೆ. ಸುಮಾರು 60 ಕಿಲೋಮೀಟರ್ ವ್ಯಾಪ್ತಿಯ ಈ ಮಾರ್ಗದ ಗ್ರಾಮಗಳಲ್ಲಿ ಜನರು ಕತ್ತಲಲ್ಲಿ ರಾತ್ರಿ ಕಳೆಯುವಂತಾಗಿದೆ.

ಭಾರೀ ಗಾಳಿ-ಮಳೆಯ ಪರಿಣಾಮವಾಗಿ ವಿದ್ಯುತ್ ಇಲಾಖೆ ಸಿಬ್ಬಂದಿ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದರೂ, ಹವಾಮಾನ ವ್ಯತ್ಯಯದಿಂದ ಕಾರ್ಯಾಚರಣೆ ನಿಧಾನಗತಿಯಲ್ಲಿದೆ. ಶೀಘ್ರದಲ್ಲಿ ವಿದ್ಯುತ್ ಸರಬರಾಜು ಪುನಃಸ್ಥಾಪನೆ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *