ಕೆಸ ತಂತು ಜೀವಕ್ಕೆ ಕುತ್ತು: ನದಿಯಲ್ಲಿ ಮುಳುಗಿ ವೃದ್ಧೆ ಸಾವು

Spread the love

​ಮೂಡಿಗೆರೆ: ಕೆಸದ ಸೊಪ್ಪು ತರಲು ತೆರಳಿದ್ದ ವೃದ್ಧೆಯೊಬ್ಬರು ಆಕಸ್ಮಿಕವಾಗಿ ನದಿಗೆ ಬಿದ್ದು ಸಾವನ್ನಪ್ಪಿರುವ ಧಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಡಿದಾಳು ಗ್ರಾಮದಲ್ಲಿ ಸಂಭವಿಸಿದೆ.

​ಕಡಿದಾಳು ಗ್ರಾಮದ ನಿವಾಸಿ ಸುಬ್ಬಮ್ಮ (65) ಮೃತಪಟ್ಟ ದುರ್ದೈವಿ. ಮಲೆನಾಡಿನ ಭಾಗದಲ್ಲಿ ಕೆಸದ ಸೊಪ್ಪು ಹೆಚ್ಚು ಪ್ರಸಿದ್ಧವಾಗಿದ್ದು,  ಬೆಳಿಗ್ಗೆ ಸುಬ್ಬಮ್ಮ ಅವರು ಕೆಸದ ಸೊಪ್ಪು ತರುವುದಾಗಿ ಮನೆಯಲ್ಲಿ ಹೇಳಿ ಹೊರಗೆ ಹೋಗಿದ್ದರು. ಸಂಜೆಯಾದರೂ ಅವರು ಮನೆಗೆ ಹಿಂತಿರುಗದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಮತ್ತು ಸ್ಥಳೀಯರು ಹುಡುಕಾಟ ಆರಂಭಿಸಿದ್ದಾರೆ.

​ಹುಡುಕಾಟದ ವೇಳೆ ಸಂಜೆ ಗ್ರಾಮದ ಹತ್ತಿರ ಹರಿಯುವ ಹೇಮಾವತಿ ನದಿಯಲ್ಲಿ ಸುಬ್ಬಮ್ಮ ಅವರ ಮೃತದೇಹ ಪತ್ತೆಯಾಗಿದೆ. ಸೊಪ್ಪು ಕೊಯ್ಯುವ ವೇಳೆ ಕಾಲು ಜಾರಿ ನದಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಸಮಾಜ ಸೇವಕ ಆರೀಫ್ ತಂಡದವರು ಮೃತದೇಹವನ್ನು ನದಿಯಿಂದ ಹೊರತೆಗೆದಿದ್ದಾರೆ.

​ಸ್ಥಳಕ್ಕೆ ಮೂಡಿಗೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *