ಚಿಕ್ಕಮಗಳೂರು: ಕಾಫಿನಾಡಿನ ನಡುರಸ್ತೆಯಲ್ಲಿ ಕೌನ್ಸಿಲರ್ ಒಬ್ಬರು ಸಾರ್ವಜನಿಕವಾಗಿ ಬಡಿಗೆ ಹಿಡಿದು ದರ್ಪ ತೋರಿರುವ ಘಟನೆ ನಡೆದಿದೆ. ವಿಶೇಷವೆಂದರೆ, ಪೆಟ್ಟು ತಿಂದ ವ್ಯಕ್ತಿಯ ಸ್ವಂತ ಪತ್ನಿಯೇ ಕೌನ್ಸಿಲರ್ ಜೊತೆ ಸೇರಿ ಪತಿಗೆ ರೌಡಿಗಳಂತೆ ಥಳಿಸಿರುವುದು ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ 34ನೇ ವಾರ್ಡ್ನ ಕೌನ್ಸಿಲರ್ ಲಕ್ಷಣ್ ಹಾಗೂ ಪೆಟ್ಟು ತಿಂದ ಚಂದ್ರಶೇಖರ್ ಅವರ ಪತ್ನಿ ಸೇರಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಸೈಟ್ ವಿಚಾರಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಈ ವಿಚಾರವಾಗಿ ಚಂದ್ರಶೇಖರ್ ಮೇಲೆ ಲಕ್ಷಣ್ ಹಾಗೂ ಪತ್ನಿ ದಾಳಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸಾಮಾನ್ಯವಾಗಿ ಅನ್ಯಾಯವಾದಾಗ ಕಾನೂನಿನ ಮೊರೆ ಹೋಗಬೇಕಾದವರು, ಇಲ್ಲಿ ತಾವೇ ಕಾನೂನನ್ನು ಕೈಗೆತ್ತಿಕೊಂಡಿದ್ದಾರೆ. ಪತ್ನಿ ಅವರು ಕೌನ್ಸಿಲರ್ ಲಕ್ಷಣ್ ಜೊತೆ ಸೇರಿ ರೌಡಿಗಳಂತೆ ಬಡಿಗೆ ಹಿಡಿದು ಪತಿ ಚಂದ್ರಶೇಖರ್ ಮೇಲೆ ಹಲ್ಲೆ ನಡೆಸಿದ್ದಾರೆ. ಇನ್ನು ಹಲ್ಲೆ ನಡೆಸಿದ್ದಲ್ಲದೆ, ಚಂದ್ರಶೇಖರ್ ಅವರ ಮೇಲೆ ಕಾರು ಹತ್ತಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಗಂಭೀರ ಆರೋಪವೂ ಕೇಳಿಬಂದಿದೆ.

ಇಬ್ಬರ ದರ್ಪಕ್ಕೆ ಒಳಗಾಗಿ ತೀವ್ರವಾಗಿ ಗಾಯಗೊಂಡಿರುವ ಚಂದ್ರಶೇಖರ್ ಸದ್ಯ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. “ನಮಗೆ ಮತ ನೀಡಿದ್ದು ಸಿಕ್ಕ ಸಿಕ್ಕವರನ್ನು ಬಡಿಯೋದಕ್ಕಾ?” ಎಂದು ಸಾರ್ವಜನಿಕರು ಕೌನ್ಸಿಲರ್ ನಡೆಗೆ ಕಿಡಿಕಾರುತ್ತಿದ್ದಾರೆ.
ಈ ಸಂಬಂಧ ಚಿಕ್ಕಮಗಳೂರಿನ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಕೌನ್ಸಿಲರ್ ಲಕ್ಷಣ್ ಹಾಗೂ ಪತ್ನಿ ವಿರುದ್ಧ ಬಿ.ಎನ್.ಎಸ್ (BNS) ಕಾಯ್ದೆಯ ಸೆಕ್ಷನ್ 118(1), 352, 351(2) ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ
















Leave a Reply