ಕಳಸ: ಕಾಫಿನಾಡಿನಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಭಾರಿ ಮಳೆ ಹಾಗೂ ಬಿರುಗಾಳಿಗೆ ಬೃಹತ್ ಮರವೊಂದು ಮನೆ ಮತ್ತು ಆಟೋ ಮೇಲೆ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಗುಡ್ಡೆಮಕ್ಕಿ ಗ್ರಾಮದಲ್ಲಿ ಸಂಭವಿಸಿದೆ.
ಗುಡ್ಡೆಮಕ್ಕಿ ಗ್ರಾಮದ ನಿವಾಸಿ ಸುಧೀರ್ ಆಚಾರ್ ಎಂಬುವವರಿಗೆ ಸೇರಿದ ಮನೆ ಹಾಗೂ ಆಟೋರಿಕ್ಷಾದ ಮೇಲೆ ಭಾರಿ ಗಾತ್ರದ ಮರವೊಂದು ಮುರಿದು ಬಿದ್ದಿದೆ. ಘಟನೆಯ ಭೀಕರತೆಗೆ ಸುಧೀರ್ ಅವರ ಮನೆಗೆ ತೀವ್ರ ಹಾನಿಯಾಗಿದ್ದು, ಅಂಗಳದಲ್ಲಿ ನಿಲ್ಲಿಸಲಾಗಿದ್ದ ಆಟೋರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಮರ ಮುರಿದು ಬೀಳುವ ಭೀಕರ ಕ್ಷಣದಲ್ಲಿ ಅದೃಷ್ಟವಶಾತ್ ಸ್ಥಳದಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸದೆ, ದೊಡ್ಡ ಕಂಟಕವೊಂದು ಪವಾಡಸದೃಶವಾಗಿ ತಪ್ಪಿದಂತಾಗಿದೆ.
ಚಿಕ್ಕಮಗಳೂರು ಜಿಲ್ಲಾದ್ಯಂತ ಸರಣಿ ಮಳೆ ಮುಂದುವರಿದಿದ್ದು, ದಿನದಿಂದ ದಿನಕ್ಕೆ ಇಂತಹ ಆಪತ್ತುಗಳು ಎದುರಾಗುತ್ತಿವೆ. ಬಿರುಗಾಳಿ-ಮಳೆಯ ರೌದ್ರಾವತಾರಕ್ಕೆ ಸಾರ್ವಜನಿಕರು ತೀವ್ರ ಆತಂಕದಲ್ಲೇ ದಿನದೂಡುವಂತಾಗಿದೆ. ಸ್ಥಳೀಯ ಆಡಳಿತವು ಸೂಕ್ಷ್ಮ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.















Leave a Reply