ಚಿಕ್ಕಮಗಳೂರಿನಲ್ಲಿ ನಕಲಿ ಐಎಎಸ್ ಅಧಿಕಾರಿ ಮಿಥುನ್ ಚಕ್ರವರ್ತಿಯ ವಂಚನೆಯ ಜಾಲ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಈಗ ವಕೀಲರೊಬ್ಬರಿಗೇ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿರುವ ರೋಚಕ ವಿಷಯ ಬಯಲಾಗಿದೆ. ನಗರದ ಹೌಸಿಂಗ್ ಬೋರ್ಡ್ ನಿವಾಸಿ ಹಾಗೂ ಹಿರಿಯ ವಕೀಲ ಸುನಿಲ್ ಕುಮಾರ್ ಅವರಿಗೆ ಐದು ತಿಂಗಳ ಹಿಂದೆ ಮೇಘನ ಎಂಬಾಕೆ ಪರಿಚಯವಾಗಿದ್ದು, ಸಿವಿಲ್ ಪ್ರಕರಣವೊಂದರ ನೆಪದಲ್ಲಿ ವಕೀಲರ ಕಚೇರಿಗೆ ಬಂದಿದ್ದ ಈಕೆ ಮಿಥುನ್ ಸಿ.ಆರ್. ಎಂಬಾತನನ್ನು ಐಎಎಸ್ ಅಧಿಕಾರಿ ಎಂದು ಸುಳ್ಳು ಹೇಳಿ ಪರಿಚಯಿಸಿದ್ದಳು. ತಾನು ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿ ಕೆಲಸ ಮಾಡುತ್ತಿರುವುದಾಗಿ ಮಿಥುನ್ ಅತ್ಯಂತ ಚಾಣಾಕ್ಷತನದಿಂದ ನಂಬಿಸಿದ್ದ.
ತನ್ನ ವಂಚನೆಗೆ ನಕಲಿ ಐಡಿ ಕಾರ್ಡ್ಗಳು, ಸ್ಯಾಲರಿ ಸರ್ಟಿಫಿಕೇಟ್ಗಳು ಹಾಗೂ ಸರ್ಕಾರದ ತರಬೇತಿ ಪತ್ರಗಳಂತಹ ನಕಲಿ ದಾಖಲೆಗಳನ್ನು ಬಳಸಿ ವಕೀಲರ ವಿಶ್ವಾಸ ಗಳಿಸಿದ್ದ ಈ ಕಿಲಾಡಿ ಜೋಡಿ, ಮನೆ ಕಟ್ಟುವ ನೆಪ ಹಾಗೂ ತುರ್ತು ಆರ್ಥಿಕ ಅಗತ್ಯಗಳ ಹೆಸರಿನಲ್ಲಿ ಸುನಿಲ್ ಕುಮಾರ್ ಅವರಿಂದ ಹಂತ ಹಂತವಾಗಿ 3,35,000 ರೂಪಾಯಿಗಳನ್ನು ಪಡೆದಿದ್ದರು. ಅಷ್ಟೇ ಅಲ್ಲದೆ ವಕೀಲರ ಮೂಲಕ ಅವರ ಸ್ನೇಹಿತರಿಂದಲೂ ಸುಮಾರು 65,000 ರೂಪಾಯಿಗಳನ್ನು ಕೊಡಿಸಿ ಕೈತೊಳೆದುಕೊಂಡಿದ್ದರು. ಕಳೆದ ತಿಂಗಳು ಬೆಂಗಳೂರಿನ ಅಮೃತಹಳ್ಳಿ ಪೊಲೀಸರು ಮಿಥುನ್ನನ್ನು ನಕಲಿ ಐಎಎಸ್ ಅಧಿಕಾರಿ ಎಂಬ ಆರೋಪದಡಿ ಬಂಧಿಸಿದಾಗ ಈತನ ಅಸಲಿ ಬಣ್ಣ ಬಯಲಾಗಿದ್ದು, ಸದ್ಯ ವಕೀಲರ ದೂರಿನ ಮೇರೆಗೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಮಿಥುನ್ ಮತ್ತು ಮೇಘನ ವಿರುದ್ಧ ಎಫ್ಐಆರ್ ದಾಖಲಾಗಿ ತನಿಖೆ ನಡೆಯುತ್ತಿದೆ.












Leave a Reply