ಚಿಕ್ಕಮಗಳೂರು ನಗರದ ತಮಿಳು ಕಾಲೋನಿಯ ಅಕ್ಸ ಮಸೀದಿ ರಸ್ತೆಯಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದು, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಎಂಟಕ್ಕೂ ಹೆಚ್ಚು ವಾಹನಗಳ ಗಾಜುಗಳನ್ನು ಪುಡಿಗೈದು, ಒಳಗಿದ್ದ ನಗದನ್ನು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ತಮಿಳು ಕಾಲೋನಿಯ ಲಾರಿ ಸ್ಟ್ಯಾಂಡ್ ಸಮೀಪದ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ಮಾಲೀಕರು ಮನೆಗೆ ತೆರಳಿದ್ದರು. ಬೆಳಿಗ್ಗೆ ಬಂದು ನೋಡಿದಾಗ ಟಾಟಾ ಏಸ್ ಸೇರಿದಂತೆ ಹಲವು ವಾಹನಗಳ ಮುಂಭಾಗದ ಗಾಜುಗಳು ಜಖಂಗೊಂಡಿರುವುದು ಕಂಡುಬಂದಿದೆ. ಕಿಡಿಗೇಡಿಗಳು ವಾಹನಗಳ ಗಾಜುಗಳನ್ನು ಒಡೆದು ಮಾತ್ರವಲ್ಲದೆ, ಡ್ಯಾಶ್ಬೋರ್ಡ್ಗಳನ್ನು ಜಖಂಗೊಳಿಸಿ ಒಳಗಿದ್ದ ಹಣವನ್ನು ದೋಚಿರುವ ಆರೋಪ ಕೇಳಿಬಂದಿದೆ.
ಸಂತ್ರಸ್ತ ವಾಹನ ಮಾಲೀಕರೊಬ್ಬರ ಪ್ರಕಾರ, ಟಾಟಾ ಏಸ್ ವಾಹನದಲ್ಲಿದ್ದ ಸುಮಾರು 25 ಸಾವಿರ ರೂ. ವ್ಯಾಪಾರದ ಹಣ ಕಳ್ಳರ ಪಾಲಾಗಿದೆ. ದುಡಿಮೆಯ ಹಣ ಕಳೆದುಕೊಂಡಿರುವ ಚಾಲಕರು ಮತ್ತು ವಾಹನ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ಮಾಹಿತಿ ಪ್ರಕಾರ, ಈ ಭಾಗದಲ್ಲಿ ಇಂತಹ ಕೃತ್ಯಗಳು ಹೊಸದಲ್ಲ. ಈ ಹಿಂದೆ ಕೂಡ ಹಲವು ಬಾರಿ ವಾಹನಗಳ ಗಾಜು ಒಡೆಯುವ ಘಟನೆಗಳು ನಡೆದಿದ್ದು, ಕಿಡಿಗೇಡಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಸ್ತೆ ಬದಿಯಲ್ಲಿ ನಿಂತಿರುವ ಗುಜರಿ ಹಾಗೂ ಬಳಕೆಯಲ್ಲಿಲ್ಲದ ವಾಹನಗಳು ಸಮಾಜಘಾತುಕ ಚಟುವಟಿಕೆಗಳಿಗೆ ತಾಣವಾಗಿವೆ ಎಂಬ ಆರೋಪವೂ ಕೇಳಿಬಂದಿದೆ
















Leave a Reply