ಬಣಕಲ್: ಚಿಕ್ಕಮಗಳೂರು ಜಿಲ್ಲೆಯ ಬಣಕಲ್ನಲ್ಲಿ ಮನುಷ್ಯನ ಕರುಳು ಹಿಂಡುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಮಾನಸಿಕ ಅಸ್ವಸ್ಥರಾಗಿದ್ದ ವೃದ್ಧೆಯೊಬ್ಬರು, ಮೃತಪಟ್ಟ ತನ್ನ ಪತಿಯ ಶವದೊಂದಿಗೇ ಬರೋಬ್ಬರಿ 10 ದಿನಗಳ ಕಾಲ ಕಾಲ ಕಳೆದ ವಿಲಕ್ಷಣ ಮತ್ತು ನೋವಿನ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ಮೃತಪಟ್ಟವರನ್ನು ಸಿಸಿಲ್ ಮೋನಿಸ್ ಎಂದು ಗುರುತಿಸಲಾಗಿದೆ. ಇವರು ತಮ್ಮ ಪತ್ನಿಯೊಂದಿಗೆ ಬಣಕಲ್ನಲ್ಲಿ ವಾಸವಿದ್ದರು. ಸಿಸಿಲ್ ಮೋನಿಸ್ ಅವರಿಗೆ ಆರೋಗ್ಯ ಕೈಕೊಟ್ಟಿದ್ದರಿಂದ, ಅವರ ಪುತ್ರ ಕೆಲವು ದಿನಗಳ ಹಿಂದೆ ತಂದೆಗೆ ಚಿಕಿತ್ಸೆ ಕೊಡಿಸಿ ಬಳಿಕ ತನ್ನ ವೃತ್ತಿ ಕೆಲಸಕ್ಕಾಗಿ ತೆರಳಿದ್ದರು. ಮತ್ತೋರ್ವ ಪುತ್ರಿ ವಿದೇಶದಲ್ಲಿ ನೆಲೆಸಿದ್ದಾರೆ.
ಮಕ್ಕಳಿಬ್ಬರು ಪ್ರತಿದಿನ ಮನೆಗೆ ಫೋನ್ ಮಾಡಿ ತಂದೆಯ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದರು. ಆದರೆ ಮನೆಯಲ್ಲಿದ್ದ ತಾಯಿ ಪ್ರತಿಬಾರಿಯೂ “ತಂದೆ ಆರೋಗ್ಯವಾಗಿದ್ದಾರೆ, ಚೆನ್ನಾಗಿದ್ದಾರೆ” ಎಂದೇ ಉತ್ತರಿಸುತ್ತಿದ್ದರು. ತಾಯಿಯ ಮಾತನ್ನು ನಂಬಿದ್ದ ಮಕ್ಕಳಿಗೆ ಆರಂಭದಲ್ಲಿ ಯಾವುದೇ ಅನುಮಾನ ಬಂದಿರಲಿಲ್ಲ.
ಆದರೆ, ದಿನಗಳು ಕಳೆದಂತೆ ತಾಯಿಯ ಮಾತಲ್ಲಿ ವ್ಯತ್ಯಾಸ ಕಂಡುಬಂದಾಗ ಮತ್ತು ತಂದೆಯ ಧ್ವನಿ ಕೇಳಿಸದಿದ್ದಾಗ ಅನುಮಾನಗೊಂಡ ಪುತ್ರ, ಕೂಡಲೇ ತನ್ನ ಸ್ನೇಹಿತನಿಗೆ ಕರೆ ಮಾಡಿ ಮನೆಗೆ ಹೋಗಿ ನೋಡುವಂತೆ ತಿಳಿಸಿದ್ದಾರೆ.
ಪುತ್ರನ ಸ್ನೇಹಿತ ಮನೆಗೆ ಭೇಟಿ ನೀಡಿದಾಗ ಕಂಡ ದೃಶ್ಯ ನಿಜಕ್ಕೂ ಎದೆ ನಡುಗಿಸುವಂತಿತ್ತು. ಸಿಸಿಲ್ ಮೋನಿಸ್ ಅವರು ಮೃತಪಟ್ಟು ಹತ್ತು ದಿನಗಳೇ ಕಳೆದಿದ್ದವು. ಶವ ಸಂಪೂರ್ಣ ಕೊಳೆಯುವ ಸ್ಥಿತಿಯಲ್ಲಿದ್ದರೂ, ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಪತ್ನಿ ಅದೇ ಶವದೊಂದಿಗೆ ವಾಸಿಸುತ್ತಿದ್ದರು. ತಂದೆ ಮೃತಪಟ್ಟಿರುವ ವಿಷಯ ತಿಳಿಯುತ್ತಿದ್ದಂತೆಯೇ ಮಕ್ಕಳು ಹಾಗೂ ಸ್ಥಳೀಯರು ದಿಗ್ಭ್ರಾಂತರಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಬಣಕಲ್ನ ಸ್ಥಳೀಯ ನಿವಾಸಿಗಳು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಲ್ಲದೆ, ತಾವೇ ಮುಂದೆ ನಿಂತು ಮೃತರ ಅಂತಿಮ ಸಂಸ್ಕಾರಕ್ಕೆ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.















Leave a Reply