ಚಿಕ್ಕಮಗಳೂರು: ನಗರದಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ನಗರದ ಸರ್ಕಾರಿ ಬಸ್ ಡಿಪೋ ಸಮೀಪದ ನಿರ್ಜನ ಪ್ರದೇಶದ ಪೊದೆಯೊಳಗೆ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿಟ್ಟಿದ್ದ ನವಜಾತ ಗಂಡು ಶಿಶುವಿನ ಶವ ಪತ್ತೆಯಾಗಿದೆ. ರಸ್ತೆ ಬದಿಯ ಪೊದೆಯಲ್ಲಿ ಅನುಮಾನಾಸ್ಪದವಾಗಿ ಬಿದ್ದಿದ್ದ ಪ್ಲಾಸ್ಟಿಕ್ ಚೀಲವನ್ನು ಗಮನಿಸಿದ ಸ್ಥಳೀಯರು ಅದನ್ನು ಬಿಚ್ಚಿ ನೋಡಿದಾಗ ಕೇವಲ ಒಂದು ದಿನದ ಮಗುವಿನ ಮೃತದೇಹ ಇರುವುದು ಕಂಡುಬಂದಿದೆ. ಮಗು ಸಾವನ್ನಪ್ಪಿದ ಬಳಿಕ ಅದಕ್ಕೆ ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಬೇಕಾಗಿದ್ದ ಹೆತ್ತವರೇ, ಚೀಲದಲ್ಲಿ ತುಂಬಿ ಕಸದಂತೆ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಕೃತ್ಯಕ್ಕೆ ಸ್ಥಳೀಯರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಆಸ್ಪತ್ರೆಯಲ್ಲೇ ಜನಿಸಿರುವ ಸಾಧ್ಯತೆ ದಟ್ಟವಾಗಿದೆ. ಏಕೆಂದರೆ ಮಗುವಿನ ಹೊಕ್ಕಳು ಬಳ್ಳಿಗೆ ಹಾಕಲಾಗುವ ವೈದ್ಯಕೀಯ ಪ್ಲಾಸ್ಟಿಕ್ ಕ್ಲಿಪ್ ಹಾಗೆಯೇ ಇರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಇದೇ ಕ್ಲಿಪ್ ಈಗ ಪೊಲೀಸರ ಕೈಗೆ ಸಿಕ್ಕಿರುವ ಬಹುದೊಡ್ಡ ಸುಳಿವಾಗಿದ್ದು, ಇದರ ಆಧಾರದ ಮೇಲೆಯೇ ತನಿಖೆ ಆರಂಭಗೊಂಡಿದೆ. ಘಟನಾ ಸ್ಥಳಕ್ಕೆ ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ
ಒಂದೇ ದಿನದ ಹಸುಗೂಸಿನ ಶವ ಪೊದೆಯಲ್ಲಿ ಪತ್ತೆ
















Leave a Reply