ಕಾಫಿನಾಡಿನ ಅರಳಗುಪ್ಪೆ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದ್ದು, ಆಟವಾಡುತ್ತಿದ್ದ ನಾಲ್ವರು ಅಪ್ರಾಪ್ತ ಮಕ್ಕಳು ಜಲಸಮಾಧಿಯಾಗಿದ್ದಾರೆ. ಸಂಬಂಧಿಕರ ಮನೆಗೆ ಅತಿಥಿಗಳಾಗಿ ಬಂದು ಸಂಭ್ರಮದಲ್ಲಿದ್ದ ಈ ಪುಟ್ಟ ಕುಡಿಗಳ ಪಾಲಿಗೆ ಗ್ರಾಮದ ಕೆರೆಯೇ ಮೃತ್ಯುಕೂಪವಾಗಿದೆ. ಕೆರೆಯಲ್ಲಿ ಈಜುತ್ತಿದ್ದ ಬಾತುಕೋಳಿಯನ್ನು ಕಂಡು, ಅದನ್ನು ಹಿಡಿಯಬೇಕೆಂಬ ಆಸೆಯಿಂದ ನೀರಿನ ಹತ್ತಿರ ಹೋದಾಗ ಈ ದುರಂತ ಸಂಭವಿಸಿದೆ. ನೀರಿನ ಆಳದ ಅರಿವಿಲ್ಲದ ಮಕ್ಕಳು ಒಬ್ಬರನ್ನೊಬ್ಬರು ರಕ್ಷಿಸಲು ಹೋಗಿ ಕೆರೆಯ ಒಡಲು ಸೇರಿದ್ದಾರೆ.
ಮೃತರನ್ನು ಮಹಾದಿಯಾ, ಅರುನುಸ್, ನಾಯುಸ್ ಮತ್ತು ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಐದರಿಂದ ಹತ್ತು ವರ್ಷದೊಳಗಿನ ಹಸುಳೆಗಳು. ಅದೃಷ್ಟವಶಾತ್ ನಾಲ್ಕು ವರ್ಷದ ಅರ್ಮಾನ್ ಎಂಬ ಮಗು ಸಾವಿನ ದವಡೆಯಿಂದ ಪಾರಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮುಗ್ಧ ಕಂದಮ್ಮಗಳನ್ನು ಕಳೆದುಕೊಂಡ ಪೋಷಕರ ರೋದನ ಆಸ್ಪತ್ರೆಯ ಆವರಣದಲ್ಲಿ ನೆರೆದಿದ್ದವರ ಕಣ್ಣುಗಳನ್ನು ತೇವಗೊಳಿಸಿದೆ. ಸ್ಥಳಕ್ಕೆ ಭೇಟಿ ನೀಡಿರುವ ಗ್ರಾಮಾಂತರ ಪೊಲೀಸರು ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂಭ್ರಮ ಮನೆ ಮಾಡಬೇಕಿದ್ದ ಮನೆಯಲ್ಲಿ ಇಂದು ಸ್ಮಶಾನ ಮೌನ ಆವರಿಸಿದ್ದು, ಕಂದಮ್ಮಗಳ ಸಾವು ಇಡೀ ಊರನ್ನೇ ಕಂಬನಿ ಮಿಡಿಯುವಂತೆ ಮಾಡಿದೆ.













Leave a Reply