ಚಿಕ್ಕಮಗಳೂರು: ಜಿಲ್ಲೆಯ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಉರುಳಿಗೆ ಸಿಲುಕಿ ಗಾಯಗೊಂಡಿರುವ ಹುಲಿಯೊಂದು ಕಳೆದ ನಾಲ್ಕೈದು ದಿನಗಳಿಂದ ಅರಣ್ಯ ಪ್ರದೇಶ ಹಾಗೂ ತೋಟಗಳ ಸುತ್ತಮುತ್ತ ಸಂಚರಿಸುತ್ತಿದ್ದು, ಪ್ರವಾಸಿಗರು ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಮುಳ್ಳಯ್ಯನಗಿರಿ ತಪ್ಪಲಿನ ಏಳುನೂರ್ ಖಾನ್ ಎಸ್ಟೇಟ್ ಸಮೀಪ ಹುಲಿ ಉರುಳಿಗೆ ಸಿಲುಕಿರುವ ಘಟನೆ ಬೆಳಕಿಗೆ ಬಂದಿದೆ. ಹುಲಿಯ ಸೊಂಟ ಭಾಗಕ್ಕೆ ಉರುಳಿ ಸಿಲುಕಿದ್ದು, ಅದೇ ಉರುಳನ್ನು ನೇತಾಡಿಸಿಕೊಂಡು ನೋವಿನಲ್ಲೇ ಸಂಚರಿಸುತ್ತಿರುವ ದೃಶ್ಯಗಳು ಕ್ಯಾಮೆರಾಗಳಲ್ಲಿ ಸೆರೆಯಾಗಿವೆ ಎಂದು ತಿಳಿದುಬಂದಿದೆ.
ಗಾಯಗೊಂಡಿದ್ದರೂ ಹುಲಿ ಆಹಾರಕ್ಕಾಗಿ ಬೇಟೆಯಾಡುತ್ತಿದ್ದು, ಜಿಂಕೆ ಹಾಗೂ ಕಡವೆಯನ್ನು ಕೊಂದಿರುವ ಕುರುಹುಗಳು ಪತ್ತೆಯಾಗಿವೆ. ಇದರಿಂದ ಹುಲಿ ಇನ್ನೂ ಚುರುಕಾಗಿ ಸಂಚರಿಸುತ್ತಿರುವುದು ಅರಣ್ಯ ಇಲಾಖೆಯ ಆತಂಕಕ್ಕೆ ಕಾರಣವಾಗಿದೆ.
ಕಳೆದ ಮೂರುನಾಲ್ಕು ದಿನಗಳಿಂದ ಹುಲಿಯನ್ನು ಸೆರೆಹಿಡಿಯಲು ಅರಣ್ಯಾಧಿಕಾರಿಗಳು ಹರಸಾಹಸ ಪಡುತ್ತಿದ್ದು, ಹಲವು ಕಡೆ ಕ್ಯಾಮೆರಾ ಟ್ರ್ಯಾಪ್ಗಳನ್ನು ಅಳವಡಿಸಿ ನಿಗಾವಹಿಸಿದ್ದಾರೆ. ಹುಲಿಯ ಚಲನವಲನಗಳ ಮೇಲೆ ನಿಗಾ ಇಟ್ಟು ಸೂಕ್ತ ಸಮಯದಲ್ಲಿ ಸೆರೆ ಕಾರ್ಯಾಚರಣೆ ನಡೆಸಲು ಇಲಾಖೆ ಸಿದ್ಧತೆ ನಡೆಸಿದೆ.
ಇನ್ನೊಂದೆಡೆ, ಏಳುನೂರ್ ಖಾನ್, ಪಂಡರವಳ್ಳಿ ಹಾಗೂ ಕೊಳಗಾಮೆ ಗ್ರಾಮಗಳ ಜನರು ಭಯಭೀತರಾಗಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ತೋಟದ ಕಾರ್ಮಿಕರು ಕೆಲಸಕ್ಕೆ ತೆರಳದಂತೆ ಅರಣ್ಯ ಇಲಾಖೆ ಸೂಚನೆ ನೀಡಿದ್ದು, ಅನಗತ್ಯವಾಗಿ ಅರಣ್ಯ ಹಾಗೂ ತೋಟ ಪ್ರದೇಶಗಳಲ್ಲಿ ಓಡಾಡದಂತೆ ಎಚ್ಚರಿಕೆ ನೀಡಲಾಗಿದೆ.
















Leave a Reply