ಚಿಕ್ಕಮಗಳೂರು: ತಡರಾತ್ರಿ ಬಾರ್ನಲ್ಲಿ ಭರ್ಜರಿ ಪಾರ್ಟಿ – ಗ್ರಾಮಸ್ಥರ ಆಕ್ರೋಶ, ರಾತ್ರೋರಾತ್ರಿ ಬಾರ್ಗೆ ಮುತ್ತಿಗೆ ಹಾಕಿ ಪ್ರತಿಭಟನೆ!

ಚಿಕ್ಕಮಗಳೂರು: ತಡರಾತ್ರಿ ಬಾರ್ನಲ್ಲಿ ಸೌಂಡ್ ಸಿಸ್ಟಮ್ ಹಾಕಿ ಭರ್ಜರಿ ಪಾರ್ಟಿ ನಡೆಸಿದ್ದಲ್ಲದೆ, ಗ್ರಾಮಸ್ಥರಿಗೆ ತೀವ್ರ ಕಿರಿಕಿರಿ ಉಂಟುಮಾಡಿದ ಘಟನೆ ಕಡೂರು ತಾಲೂಕಿನಲ್ಲಿ ನಡೆದಿದೆ. ಇದರಿಂದ ಆಕ್ರೋಶಗೊಂಡ ಮಹಿಳೆಯರು ಸೇರಿದಂತೆ ನೂರಾರು ಹಳ್ಳಿಗರು ರಾತ್ರೋರಾತ್ರಿ ಬಾರ್ ಮುಂದೆ ಪ್ರತಿಭಟನೆ ನಡೆಸಿ, ಬಾರ್ನಲ್ಲಿದ್ದವರನ್ನು ಒಳಗಡೆ ಹಾಕಿ ಬೀಗ ಜಡಿದ ಘಟನೆ ಬೆಳಕಿಗೆ ಬಂದಿದೆ.
ಕಡೂರು ತಾಲೂಕಿನ ಎಮ್ಮೆದೊಡ್ಡಿ ಸಮೀಪದ ಮುಸ್ಲಾಪುರಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದಲ್ಲಿರುವ ಬಾರ್ನಲ್ಲಿ ತಡರಾತ್ರಿವರೆಗೂ ಜೋರಾಗಿ ಹಾಡುಗಳನ್ನು ಹಾಕಿ, ಕೂಗಾಟ-ಕಿರುಚಾಟ ನಡೆಸಲಾಗುತ್ತಿತ್ತು. ಇದರಿಂದ ನಿವಾಸಿಗಳಿಗೆ, ವಿಶೇಷವಾಗಿ ವೃದ್ಧರು ಹಾಗೂ ಮಕ್ಕಳಿಗೆ ತೀವ್ರ ತೊಂದರೆಯಾಗಿತ್ತು. ನಿಯಮ ಮೀರಿ ತಡರಾತ್ರಿವರೆಗೆ ಪಾರ್ಟಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸಹನೆ ಕಳೆದುಕೊಂಡ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಬಾರ್ ಮುಂದೆ ಜಮಾಯಿಸಿದರು.
ಪಾರ್ಟಿ ಮಾಡುತ್ತಿದ್ದವರನ್ನು ಬಾರ್ ಒಳಗಡೆಯೇ ಕೂಡಿಹಾಕಿದ ಗ್ರಾಮಸ್ಥರು, ಸ್ಥಳದಲ್ಲೇ ಕುಳಿತು ತೀವ್ರ ಪ್ರತಿಭಟನೆ ನಡೆಸಿದರು. “ನಮ್ಮ ಗ್ರಾಮಕ್ಕೆ ಈ ಬಾರ್ ಬೇಡವೇ ಬೇಡ, ತಕ್ಷಣವೇ ಇದನ್ನು ಪೂರ್ಣವಾಗಿ ಬಂದ್ ಮಾಡಿಸಬೇಕು” ಎಂದು ಆಗ್ರಹಿಸಿ ಪೊಲೀಸರ ವಿರುದ್ಧ ಹಾಗೂ ಬಾರ್ ಮಾಲೀಕರ ವಿರುದ್ಧ ಆಕ್ರೋಶ ಹೊರಹಾಕಿದರು.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಕಡೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಸ್ಥರನ್ನು ಸಮಾಧಾನಪಡಿಸಲು ಯತ್ನಿಸಿದ್ದು, ನಿಯಮ ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.









