ಹೈಕೋರ್ಟ್ ನಿರ್ದೇಶನದನ್ವಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಕಾರ್ಯ ನಡೆದಿದ್ದು, ಚುನಾವಣಾ ಫಲಿತಾಂಶದಲ್ಲಿ ಯಾವುದೇ ಗಣನೀಯ ಬದಲಾವಣೆ ಕಂಡುಬಂದಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ್ ಶೆಟ್ಟಿ ತಿಳಿಸಿದ್ದಾರೆ. ಎಣಿಕೆ ಕೇಂದ್ರದಿಂದ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ಆದೇಶದಂತೆ ತಿರಸ್ಕೃತಗೊಂಡಿದ್ದ 279 ಮತಗಳು ಹಾಗೂ ಅಗತ್ಯವಿದ್ದಲ್ಲಿ 1540 ಮಾನ್ಯ ಮತಗಳನ್ನು ಮರು ಪರಿಶೀಲಿಸುವ ಪ್ರಕ್ರಿಯೆ ನಡೆದಿದೆ ಎಂದು ಮಾಹಿತಿ ನೀಡಿದರು.
ಒಟ್ಟು 20 ಬಾಕ್ಸ್ಗಳ ಪೈಕಿ 19 ಬಾಕ್ಸ್ಗಳು ಸಮರ್ಪಕ ಶಾಸನಬದ್ಧ ದಾಖಲೆಗಳನ್ನು ಹೊಂದಿದ್ದು, ಒಂದು ಬಾಕ್ಸ್ನಲ್ಲಿನ ಅಂಚೆ ಮತಗಳ ಎಣಿಕೆ ಕಾರ್ಯ ಪೂರ್ಣಗೊಂಡಿದೆ. ತಿರಸ್ಕೃತಗೊಂಡಿದ್ದ 279 ಮತಗಳ ಪೈಕಿ 267 ಮತಗಳು ಮಾತ್ರ ಸದ್ಯ ಲಭ್ಯವಿದ್ದು, 12 ಮತಗಳ ವ್ಯತ್ಯಾಸ ಕಂಡುಬಂದಿದೆ. ಅಲ್ಲದೆ ಘೋಷಣಾ ನಮೂನೆ ಇಲ್ಲದ ಕಾರಣ 31 ಮತಗಳು ಅಸಿಂಧುಗೊಂಡಿದ್ದು, ಉಳಿದ ಕೆಲವು ಮತಗಳು ತಾಂತ್ರಿಕ ಕಾರಣಗಳಿಂದಾಗಿ ತಿರಸ್ಕೃತವಾಗಿಯೇ ಉಳಿದಿವೆ.
ಪ್ರಸ್ತುತ ಎಣಿಕೆಯ ಪ್ರಕಾರ ಶಾಸಕ ರಾಜೇಗೌಡರಿಗೆ ಲಭಿಸಿರುವ ಮತಗಳಲ್ಲಿ ಕೇವಲ ಒಂದು ಮತದ ವ್ಯತ್ಯಾಸವಿರಬಹುದು ಎಂದು ಅಂದಾಜಿಸಲಾಗಿದ್ದು, ಒಟ್ಟಾರೆ ಫಲಿತಾಂಶದ ಮೇಲೆ ಇದು ಯಾವುದೇ ಪ್ರಭಾವ ಬೀರಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಪ್ರತಿನಿಧಿಗಳ ಸಮ್ಮುಖದಲ್ಲಿ ಪಾರದರ್ಶಕವಾಗಿ ಈ ಇಡೀ ಪ್ರಕ್ರಿಯೆ ಜರುಗಿದ್ದು, ಹೈಕೋರ್ಟ್ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ ಎಂದು ಸುಧಾಕರ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.












Leave a Reply