ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆಯು ರಾಜ್ಯದ ಗಮನ ಸೆಳೆದಿದ್ದು, ಆರಂಭದಲ್ಲೇ ತೀವ್ರ ಗೊಂದಲ ಹಾಗೂ ಆಕ್ಷೇಪಗಳಿಗೆ ಸಾಕ್ಷಿಯಾಗಿದೆ. ಜಿಲ್ಲಾ ಚುನಾವಣಾ ಅಧಿಕಾರಿ ಗೌರವ ಶೆಟ್ಟಿ ಹಾಗೂ ವಿವಿಧ ಪಕ್ಷಗಳ ಅಭ್ಯರ್ಥಿಗಳ ಸಮ್ಮುಖದಲ್ಲಿ ಸಗನೀಪುರ ರಸ್ತೆಯ ಇವಿಎಂ ವೇರ್ ಹೌಸ್ನ ಸ್ಟ್ರಾಂಗ್ ರೂಂ ತೆರೆಯಲಾಯಿತಾದರೂ, ಅಲ್ಲಿನ ದೃಶ್ಯಗಳು ರಾಜಕೀಯ ನಾಯಕರ ಆಕ್ರೋಶಕ್ಕೆ ಕಾರಣವಾಗಿವೆ. ಒಟ್ಟು 20 ಟ್ರಂಕ್ಗಳಲ್ಲಿ ಅಂಚೆ ಮತಪತ್ರಗಳನ್ನು ಸಂಗ್ರಹಿಸಿಡಲಾಗಿತ್ತು, ಆದರೆ ಪರಿಶೀಲನೆ ವೇಳೆ ಒಂದು ಟ್ರಂಕ್ ಸೀಲ್ ಇಲ್ಲದೆ ತೆರೆದಿರುವುದು ಹಾಗೂ ಮತ್ತೊಂದು ಟ್ರಂಕ್ ಜಖಂಗೊಂಡಿರುವುದು ಕಂಡುಬಂದಿದೆ. ಈ ಬೆಳವಣಿಗೆಯಿಂದ ಆತಂಕಗೊಂಡ ಶಾಸಕ ಟಿ.ಡಿ. ರಾಜೇಗೌಡ ಹಾಗೂ ಅವರ ಏಜೆಂಟರು, ಮತಪತ್ರಗಳ ಸುರಕ್ಷತೆಯ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಹಿಂದೆ ನಡೆದ ಚುನಾವಣೆಯಲ್ಲಿ 279 ಅಂಚೆ ಮತಗಳ ತಿರಸ್ಕಾರದ ವಿಚಾರವಾಗಿ ಮಾಜಿ ಶಾಸಕ ಡಿ.ಎನ್. ಜೀವರಾಜ್ ಅವರು ಕಾನೂನು ಹೋರಾಟ ನಡೆಸಿದ್ದ ಹಿನ್ನೆಲೆಯಲ್ಲಿ, ಈಗ ಒಟ್ಟು 1,822 ಅಂಚೆ ಮತಗಳ ಮರು ಎಣಿಕೆಗೆ ಹೈಕೋರ್ಟ್ ಆದೇಶಿಸಿದೆ. ಈ ಹೈವೋಲ್ಟೇಜ್ ಪ್ರಕ್ರಿಯೆಯನ್ನು ವೀಕ್ಷಿಸಲು ಶಾಸಕ ರಾಜೇಗೌಡ, ಡಿ.ಎನ್. ಜೀವರಾಜ್ ಮತ್ತು ಜೆಡಿಎಸ್ ಮುಖಂಡ ಸುಧಾಕರ್ ಶೆಟ್ಟಿ ಸ್ಥಳಕ್ಕೆ ಆಗಮಿಸಿದ್ದಾರೆ. ಟ್ರಂಕ್ಗಳ ಹಾನಿಯ ಬಗ್ಗೆ ಉಂಟಾಗಿರುವ ಗೊಂದಲಕ್ಕೆ ಉತ್ತರಿಸಿರುವ ಅಧಿಕಾರಿಗಳು, ಸ್ಟ್ರಾಂಗ್ ರೂಂ ತೆರೆದ ಕ್ಷಣದಿಂದ ಎಲ್ಲವನ್ನೂ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿ ನಾಗರಾಜ್ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಮತಪತ್ರಗಳನ್ನು ಐ.ಡಿ.ಎಸ್.ಜಿ. ಕಾಲೇಜಿಗೆ ರವಾನಿಸಲಾಗಿದ್ದು, ಮರು ಎಣಿಕೆಯ ಅಂತಿಮ ಫಲಿತಾಂಶದ ಮೇಲೆ ಇಡೀ ರಾಜ್ಯದ ಕುತೂಹಲ ನೆಟ್ಟಿದೆ.













Leave a Reply