ಕಲ್ಲು ತೂರಾಟ ಆರೋಪ: ಬೂದಿ ಮುಚ್ಚಿದ ಕೆಂಡದಂತಾದ ಕಾಫಿನಾಡು

ಚಿಕ್ಕಮಗಳೂರು: ನಗರದ ವಿಜಯಪುರ ಬಡಾವಣೆಯಲ್ಲಿ ಅನ್ಯಕೋಮಿನ ಯುವಕರು ಹಿಂದೂಗಳ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಘಟನೆಯಿಂದಾಗಿ ಇಡೀ ನಗರ ಮಧ್ಯರಾತ್ರಿ ಅಕ್ಷರಶಃ ಬೂದಿ ಮುಚ್ಚಿದ ಕೆಂಡದಂತಾಗಿತ್ತು. ಕಳೆದ ಒಂದು ವಾರದಿಂದ ಕಿಡಿಗೇಡಿಗಳ ಗುಂಪು ಮನೆಗಳ ಮೇಲೆ ಕಲ್ಲು ಎಸೆಯುವುದು ಮತ್ತು ಕಳೆದ ಮೂರು ದಿನಗಳಿಂದ ಹೆಣ್ಣುಮಕ್ಕಳನ್ನು ಚುಡಾಯಿಸುವಂತಹ ಕೃತ್ಯಗಳಲ್ಲಿ ತೊಡಗಿದೆ ಎನ್ನುವುದು ಆಕ್ರೋಶಕ್ಕೆ ಕಾರಣವಾಯಿತು. ಈ ಸಂಬಂಧ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ಯುವಕರನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ​ಈ ಘಟನೆಯ ಬೆನ್ನಲ್ಲೇ ಬಸವನಹಳ್ಳಿ ಪೊಲೀಸ್ ಠಾಣೆ ಮತ್ತು ಸರ್ಕಾರಿ ಆಸ್ಪತ್ರೆಯ ಮುಂದೆ ಎರಡೂ ಕೋಮಿನ ನೂರಾರು ಯುವಕರು ಜಮಾಯಿಸಿದ್ದರಿಂದ ತೀವ್ರ ಬೂದಿ ಮುಚ್ಚಿದ ವಾತಾವರಣ ನಿರ್ಮಾಣವಾಗಿತ್ತು. ಕಲ್ಲು ಹೊಡೆದವರು ಇವರಲ್ಲ ಎಂದು ಒಂದು ಕಡೆಯವರು ವಾದಿಸಿದರೆ, ಹಲ್ಲೆ ಮಾಡಿದವರ ವಿರುದ್ಧವೂ ಕ್ರಮ ಜರುಗಿಸಬೇಕೆಂದು ಮತ್ತೊಂದು ಗುಂಪು ಪಟ್ಟು ಹಿಡಿಯಿತು. ಪರಿಸ್ಥಿತಿ ಕೈಮೀರುವ ಮುನ್ನ ಎಚ್ಚೆತ್ತ ಪೊಲೀಸರು ಜಮಾಯಿಸಿದ್ದ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಹೈರಾಣಾದರು. ಸದ್ಯ ಹಲ್ಲೆಗೊಳಗಾದ ಯುವಕರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ.

Leave a Reply

Your email address will not be published. Required fields are marked *