ಚಿಕ್ಕಮಗಳೂರು: ನಗರದ ಕುವೆಂಪು ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕೃಷಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಕನ್ನೇರಿ ಸ್ವಾಮೀಜಿ ವಿರುದ್ಧ ನಿವೃತ್ತ ಉಪನ್ಯಾಸಕರೊಬ್ಬರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಸ್ವಾಮೀಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ನಿವೃತ್ತ ಉಪನ್ಯಾಸಕರು, “ಅವನಿಗೆ ಗೋ ಬ್ಯಾಕ್ ಎನ್ನಬೇಕಿತ್ತು, ಆದರೆ ಆತ ನನಗೆ ಸಿಗಲಿಲ್ಲ. ಬಸವಣ್ಣನ ಅನುಯಾಯಿಗಳು ಇರುವ ಈ ಜಾಗಕ್ಕೆ ಬರಲು ಅವನಿಗೆ ಯಾವುದೇ ಅಧಿಕಾರವಿಲ್ಲ” ಎಂದು ಕಿಡಿಕಾರಿದರು.
”ಇಲ್ಲಿಗೆ ಅವರು ಬಂದಿರುವುದು ಧರ್ಮವನ್ನು ಒಡೆಯುವ ಅಪಪ್ರಚಾರ ಮಾಡಲು. ಲಿಂಗ ಧರಿಸಿರುವವರನ್ನು ದಾರಿ ತಪ್ಪಿಸಲು ಮತ್ತು ಧರ್ಮ ಸೀಳಲು ಬಂದಿದ್ದಾರೆ. ಯಾವುದೋ ಸಂಘಟನೆಗೆ ಗುಲಾಮರಾಗಿರುವ ಇವರನ್ನು ಕೋಟಿ-ಕೋಟಿ ಹಣ ಕೊಟ್ಟು ಬುಕ್ ಮಾಡಲಾಗಿದೆ. ಇಂತಹ ಗುಲಾಮರು ನಮ್ಮ ಗುರುಗಳನ್ನು ನಿಂದಿಸುವುದು ಎಷ್ಟು ಸರಿ?” ಎಂದು ಅವರು ಪ್ರಶ್ನಿಸಿದರು.
’ತಾಲಿಬಾನಿ’ ಹೇಳಿಕೆಗೆ ತೀವ್ರ ವಿರೋಧ:
ವಿಶ್ವಗುರು ಬಸವಣ್ಣನವರಿಗೆ ಮತ್ತು ಅವರ ಅನುಯಾಯಿಗಳಿಗೆ ಸ್ವಾಮೀಜಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ ಅವರು, “ನಮ್ಮನ್ನು ತಾಲಿಬಾನಿಗಳು ಎಂದು ಕರೆದಿದ್ದಾರೆ. ಖಾವಿ ಧರಿಸಿದವರ ಬಾಯಲ್ಲಿ ಇಂತಹ ಕೆಟ್ಟ ಮಾತುಗಳು ಬರಬಾರದು” ಎಂದು ತೀವ್ರ ಬೇಸರ ಹಾಗೂ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಕೃಷಿ ಜಾಗೃತಿ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದ್ದು, ಸ್ಥಳೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
















Leave a Reply