ಚಿಕ್ಕಮಗಳೂರು ಕಾಂಗ್ರೆಸ್‌ನಲ್ಲಿ ಅಸಮಾಧಾನ: ಸ್ಥಳೀಯ ನಾಯಕರ ಕಡೆಗಣನೆ ಆರೋಪಿಸಿ ಸಿಎಂಗೆ ಸಚಿನ್ ಮೀಗಾ ಪತ್ರ

Spread the love

 

ದಾವಣಗೆರೆಯ ಬೆನ್ನಲ್ಲೇ ಈಗ ಕಾಫಿನಾಡು ಚಿಕ್ಕಮಗಳೂರಿನ ಕಾಂಗ್ರೆಸ್ ಪಾಳಯದಲ್ಲೂ ಅಸಮಾಧಾನದ ಹೊಗೆಯಾಡುತ್ತಿದೆ. ಎನ್.ಆರ್. ಪುರ ತಾಲೂಕಿನ ಹಂತೂರು ಗ್ರಾಮದಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನ ಸೇತುವೆ ಹಾಗೂ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಈ ಸರ್ಕಾರಿ ಕಾರ್ಯಕ್ರಮದಲ್ಲಿ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ ಸ್ಥಳೀಯ ನಾಯಕರಿಗೆ ಮತ್ತು ನಿಷ್ಠಾವಂತ ಕಾರ್ಯಕರ್ತರಿಗೆ ಸರಿಯಾದ ಮನ್ನಣೆ ಸಿಕ್ಕಿಲ್ಲ ಎನ್ನುವುದು ಕಾರ್ಯಕರ್ತರ ಮುಖ್ಯ ಆರೋಪವಾಗಿದೆ.

ಈ ಕುರಿತು ಕೆಪಿಸಿಸಿ ಕಿಸಾನ್ ಘಟಕದ ರಾಜ್ಯಾಧ್ಯಕ್ಷರಾದ ಸಚಿನ್ ಮೀಗಾ ಅವರು ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯರು, ಎಪಿಎಂಸಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಂತಹ ತಳಮಟ್ಟದ ನಾಯಕರೇ ಪಕ್ಷದ ನಿಜವಾದ ಬಲವಾಗಿದ್ದು, ಇಂತಹ ಸರ್ಕಾರಿ ವೇದಿಕೆಗಳಲ್ಲಿ ಅವರಿಗೆ ಪ್ರಾತಿನಿಧ್ಯ ನೀಡದಿದ್ದರೆ ಅವರ ಮನೋಬಲ ಕುಗ್ಗುತ್ತದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪಕ್ಷ ಮತ್ತು ಸರ್ಕಾರದ ನಡುವಿನ ಬಾಂಧವ್ಯ ಬಲಗೊಳ್ಳಬೇಕಾದರೆ ಸ್ಥಳೀಯ ನಾಯಕತ್ವವನ್ನು ಗುರುತಿಸುವುದು ಅತ್ಯಗತ್ಯ ಎಂದು ಸಚಿನ್ ಮೀಗಾ ಮನವಿ ಮಾಡಿದ್ದಾರೆ. ಇದರೊಂದಿಗೆ, ಸೇತುವೆಯ ಮೇಲೆ ಸ್ಥಾಪಿಸಲಾಗಿರುವ ಮುಖ್ಯಮಂತ್ರಿಯವರ ಪ್ರತಿಮೆಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕು ಎಂಬ ಆಗ್ರಹವನ್ನೂ ಅವರು ಪತ್ರದ ಮೂಲಕ ಸರ್ಕಾರಕ್ಕೆ ತಲುಪಿಸಿದ್ದಾರೆ. ಈ ಬೆಳವಣಿಗೆಯು ಚಿಕ್ಕಮಗಳೂರು ಜಿಲ್ಲಾ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸಂಘಟನೆಯ ಒಳಜಗಳವನ್ನು ಬಹಿರಂಗಪಡಿಸಿದೆ.

Leave a Reply

Your email address will not be published. Required fields are marked *