ಬೆಟ್ಟದಮಳಲಿಯಲ್ಲಿ ಕಾಫಿ ಬೆಳೆಗಾರನ ಶೆಡ್‌ಗೆ ಬೆಂಕಿ: ಲಕ್ಷಾಂತರ ಮೌಲ್ಯದ ಕೃಷಿ ಸಲಕರಣೆಗಳು ಭಸ್ಮ

Spread the love

ಚಿಕ್ಕಮಗಳೂರು: ತಾಲೂಕಿನ ಆವತಿ ಹೋಬಳಿ ಬೆಟ್ಟದಮಳಲಿ ಗ್ರಾಮದಲ್ಲಿ ಕಾಫಿ ಬೆಳೆಗಾರರೊಬ್ಬರ ತೋಟದ ಶೆಡ್‌ಗೆ ಬೆಂಕಿ ಬಿದ್ದಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಕೃಷಿ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಬಿ. ಹೆಚ್. ಮಂಜುನಾಥ್ ಗೌಡ ಎಂಬುವರಿಗೆ ಸೇರಿದ ಈ ಶೆಡ್‌ನಲ್ಲಿ ಇರಿಸಲಾಗಿದ್ದ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಜನರೇಟರ್, ನೀರೆತ್ತುವ ಪಂಪ್, ಜಟ್ಟುಗಳು, ಪೈಪ್‌ಗಳು ಹಾಗೂ ರಾಸಾಯನಿಕ ಗೊಬ್ಬರ ಸಂಪೂರ್ಣವಾಗಿ ನಾಶವಾಗಿವೆ. ಈ ಘಟನೆಯು ದುಷ್ಕರ್ಮಿಗಳ ಕೃತ್ಯವೆಂದು ಶಂಕಿಸಲಾಗಿದ್ದು, ಈ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಕೆ. ಯು. ರತೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಕೆರೆಮಕ್ಕಿ ಮಹೇಶ್ ಹಾಗೂ ಆವತಿ ಹೋಬಳಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಹೆಚ್. ಬಿ. ಮಹೇಂದ್ರ ಭೇಟಿ ನೀಡಿ ಮಂಜುನಾಥ್ ಗೌಡರಿಗೆ ಸಾಂತ್ವನ ಹೇಳಿದರು. ಆರೋಪಿಗಳನ್ನು ಶೀಘ್ರವಾಗಿ ಪತ್ತೆಹಚ್ಚಿ ಕಠಿಣ ಶಿಕ್ಷೆ ವಿಧಿಸುವಂತೆ ಆಲ್ದೂರು ವೃತ್ತ ನಿರೀಕ್ಷಕರಿಗೆ ಮುಖಂಡರು ಒತ್ತಾಯಿಸಿದರು. ತೋಟಗಾರಿಕಾ ಇಲಾಖೆಯಿಂದ ಹೆಚ್ಚಿನ ಪರಿಹಾರ ಕೊಡಿಸುವಲ್ಲಿ ಸಹಕರಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬಸರವಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ. ಎಂ. ರಮೇಶ್, ಗ್ರಾಮ ಆಡಳಿತ ಅಧಿಕಾರಿ ಶಾಶ್ವತ್, ಪೊಲೀಸ್ ಅಧಿಕಾರಿಗಳು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *