ವಿವಾಹಿತ ಮಹಿಳೆಗಾಗಿ ಇಬ್ಬರ ನಡುವೆ ಭೀಕರ ಫೈಟಿಂಗ್; ಲಾಂಗ್ ಬೀಸಿ ಯುವಕನ ಹಸ್ತ ಕಟ್!

Spread the love

 

ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ಭೀಕರ ಘಟನೆಯೊಂದು ಸಂಭವಿಸಿದೆ. ವಿವಾಹಿತ ಮಹಿಳೆಯೊಬ್ಬಳಿಗಾಗಿ ಇಬ್ಬರು ಪುರುಷರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಒಬ್ಬನ ಕೈ ಹಸ್ತ ಸಂಪೂರ್ಣವಾಗಿ ಕತ್ತರಿಸಿಹೋಗಿರುವ ಘಟನೆ ಬಾಳೆಹೊನ್ನೂರು ಸಮೀಪದ ಅಡಿಗೆಬೈಲು ಗ್ರಾಮದಲ್ಲಿ ನಡೆದಿದೆ.

ಘಟನೆಯ ಹಿನ್ನೆಲೆ:

​ಗಂಡನಿಂದ ದೂರವಿದ್ದ ನಾಗರತ್ನ ಎಂಬ ಮಹಿಳೆಗಾಗಿ ಶೇಷಗಿರಿ (40) ಹಾಗೂ ಅರುಣ್ (35) ಎಂಬ ಇಬ್ಬರ ನಡುವೆ ಕಳೆದ ಕೆಲವು ದಿನಗಳಿಂದ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ಅಡಿಗೆಬೈಲು ಗ್ರಾಮದಲ್ಲಿ ಇಬ್ಬರ ನಡುವೆ ಮತ್ತೆ ಮಾತಿನ ಚಕಮಕಿ ನಡೆದು, ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದೆ.

ಕೈ ಅಡ್ಡಕೊಟ್ಟಿದ್ದಕ್ಕೆ ಹಸ್ತವೇ ತುಂಡು!

​ಗಲಾಟೆ ತಾರಕಕ್ಕೇರಿದಾಗ ಆಕ್ರೋಶಗೊಂಡ ಶೇಷಗಿರಿ ಎಂಬಾತ ಅರುಣ್ ಮೇಲೆ ಮಾರಕಾಸ್ತ್ರದಿಂದ (ಲಾಂಗ್) ಏಕಾಏಕಿ ದಾಳಿ ಮಾಡಿದ್ದಾನೆ. ಈ ವೇಳೆ ತನ್ನನ್ನು ರಕ್ಷಿಸಿಕೊಳ್ಳಲು ಅರುಣ್ ಕೈ ಅಡ್ಡ ಕೊಟ್ಟಿದ್ದಾನೆ. ಬೀಸಿದ ಲಾಂಗ್ ಏಟಿನ ತೀವ್ರತೆಗೆ ಅರುಣ್ ಅವರ ಕೈ ಹಸ್ತ ಸಂಪೂರ್ಣವಾಗಿ ತುಂಡಾಗಿ ನೆಲಕ್ಕೆ ಬಿದ್ದಿದೆ.

ಮಂಗಳೂರು ಆಸ್ಪತ್ರೆಗೆ ರವಾನೆ:

​ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಅರುಣ್‌ನನ್ನು ತಕ್ಷಣವೇ ಚಿಕ್ಕಮಗಳೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಗಾಯದ ತೀವ್ರತೆ ಹೆಚ್ಚಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಸದ್ಯ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

​ಈ ಭೀಕರ ಘಟನೆಗೆ ಸಂಬಂಧಿಸಿದಂತೆ ಸದ್ಯ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *